Monday, September 2, 2024

ಪ್ರತ್ಯುತ್ತರ

 

ಇತ್ತು ಅದಿತ್ತು ತನ್ನ ಪಾಡಿಗೆ ತಾನಿತ್ತು 
ಶಮೀಕ ಕಾನನದೆ ತಪಗೈವಂತೆ 
ಜೀವಜಗವನ್ನೆಲ್ಲ ಕಾಪಿಡುತಲಿತ್ತು
ಸುಧೆಯೂಡುತಿತ್ತು ಮುದ ನೀಡುತಿತ್ತು 
ಬೆಳೆಯುತಿತ್ತು ಬೆಳೆಸುತಿತ್ತು ಬಳಕೆಗೂ
ಒದಗುತಿತ್ತು ಬೇಕಿದ್ದನೊದಗಿಸುತಿತ್ತು 
ಅತ್ಯಾಶೆಯೊಡಲ ನರ ಕಾಲಿಡುವವರೆಗೂ 
ಬಂದವನು ತನ್ನ ತಾ ಅರಸನೆಂದುಕೊಂಡ 
ಕಂಡಿದ್ದೆಲ್ಲವನು ಕಡಿದುಂಡ ಕೊಂದುಂಡ 
ಸ್ವಾರ್ಥ ಕ್ಷುಧೆ ತೃಷ್ಣೆ ತೀರದಾಗ ಸತ್ತ ಹಾವ 
ಮುನಿಕೊರಳ್ಗಗಿತ್ತು ವಿವೇಕ ಮರೆದ ಜೀವ
ಎಲ್ಲವನು ಎಲ್ಲ ಸಮಯದೊಳ್ ತಾಳ್ವ 
ಸಹನೆ ಯಾರಿಗೂ ಇಲ್ಲ ಸಲ್ಲ ಅವಶ್ಯವಿಲ್ಲ 
ಶಮೀಕಸುತ ತಂದೆಯಿಂದುಪಕೃತನಿರ್ದ 
ಅಪ್ಪನ ಸ್ಥಿತಿ ನೋಡಿ ಉರಿದೆದ್ದು ಕಿಡಿಕಾರ್ದ 
ಸಗ್ಗದಂತಿರ್ದ ನಿಸರ್ಗವ ಮಸಣಿಸಿದವ 
ಶಪಿಸುತಿನ್ನೇಳು ದಿನದಲಿ ಮರಣಿಸಲಿ 
ಮತ್ತದೇ ಮರುಕಳಿಸಿದೆ ನರನಾಟ ಮೀರಿದೆ 
ಪ್ರಕೃತಿ ಮುಳಿದಿದೆ ಲೆಕ್ಕವಿಡದೆ ನಡೆಸಿದೆ 
ನಡೆಯುತ್ತಲಿದೆ ಜೀವಂಗಳಾಪೋಶನ 


ಕೆಲವು ತಮಾಷೆ ಪ್ರಸಂಗಗಳು

ತುಣುಕು - ಮಿಣುಕು ೧ 
ನಮ್ಮ ಮನೆಗೆ ನನ್ನ ದೊಡ್ಡಮ್ಮನ ಮಕ್ಕಳು ಮೊಮ್ಮಕ್ಕಳು ಬಂದಿಳಿದರು . ಸ್ವಲ್ಪ ಹೊತ್ತಿನ ಬಳಿಕ ಮಕ್ಕಳೆಲ್ಲ ಆಟ ಆಡಲು ಆರಂಭಿಸಿದವು . ಸುತ್ತಲೂ ನಾವೂ ಮನೆಯವರೆಲ್ಲ ಕುಳಿತು ಆ ಮಕ್ಕಳು ಆಡುವುದನ್ನು ನೋಡುತ್ತಾ ನಮ್ಮ ಪಾಡಿಗೆ ನಮ್ಮದೇ ನೋ ವಿಷಯಗಳನ್ನು ಮಾತನಾಡಿಕೊಂಡು ಕುಳಿತಿದ್ದೆವು . ಆ ಮಕ್ಕಳಲ್ಲಿ ಒಬ್ಬಳು ತುಂಬಾ ಪ್ರಶ್ನೆ ಕೇಳುವವಳು. ಬಂದೂ ಬಂದೂ ನನ್ನ ಕಸಿನ್ ಬ್ರದರ್ ಗೆ ಪ್ರಶ್ನೆ ಕೇಳಲಾರಂಭಿಸಿದಳು . ಮೊದಮೊದಲು ಅವನಿಗೆ ಅವಳ ಪ್ರಶ್ನೆ ಅರ್ಥವಾಗಲಿಲ್ಲ . ಎಸ್ ಎಸ್ ಕಂ ಎಗೈನ್ ಎಂದು ಸ್ಟೈಲಾಗಿ ಇಂಗ್ಲಿಷ್ ನಲ್ಲಿ ಹೇಳಿದ . ಆ ಪೋರಿ ಬರೀ ಎಸ್ ಎಸ್ ಮಾತ್ರ ಕೇಳಿಸಿಕೊಂಡು " ಈ ಅಂಕಲ್ ಗೆ ಎಸ್ ಎಸ್ ಬಿಟ್ಟರೆ ಬೇರೇನೂ ಬರಲ್ಲ ಕಣ್ರೇ " ಅಂತ ಜೋರಾಗಿ ಹೇಳಿದಾಗ ಅಲ್ಲಿದ್ದವರಿಗೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಗು ಬಂತು. ಮೊನ್ನೆ ಮೊನ್ನೆ ಆ ಬಜಾರಿಯ ಮದುವೆಯಲ್ಲಿ ಇದನ್ನೆಲ್ಲಾ ನೆನಪಿಸಿಕೊಂಡು ಎಲ್ಲರೂ ಮತ್ತೆ ಮತ್ತೆ ನಕ್ಕೆವು. 

ತುಣುಕು ಮಿಣುಕು ೨

ಕೆಲವು ವರ್ಷಗಳ ಹಿಂದೆ ನಾನೊಂದು ಸರ್ಕಾರಿ ಶಾಲೆಯಲ್ಲಿ ಹಂಗಾಮಿ ಬೋಧಕನಾಗಿ ಕೆಲಸ ಮಾಡುತ್ತಿದ್ದೆ . ಒಂದು ದಿನ ನಾನು ಕೆಲಸ ಮಾಡುತ್ತಿದ್ದ ಜಾಗದ ಕ್ಷೇತ್ರ ಎಂಎಲ್ಎ ಶಾಲೆಗೆ ಭೇಟಿ ನೀಡುತ್ತಾರೆ ಎಂದು ತಿಳಿದುಬಂತು. ನಾವೆಲ್ಲ ನಮ್ಮ ನಮ್ಮ ತಯಾರಿ ನಡೆಸಿಕೊಂಡು ಎಂಎಲ್ಎ ಸಾಹೇಬರನ್ನು ಎದುರುಗೊಳ್ಳಲು ಸಜ್ಜಾದೆವು
ಎಂಎಲ್ಎ ಸಾಹೇಬರ ಜೊತೆಗೆ ಬಿಇಓ ಕೂಡಾ ಬಂದರು . ಅವರಿಗೆ ಬೇಕಾದ ಕಡತ ಪರಿಶೀಲನೆ ನಡೆಸಿದಮೇಲೆ ಎಲ್ಲಾ ಬೋಧಕರನ್ನೂ ಒಂದೆಡೆ ಸೇರಿಸಿದರು . ನಾವೆಲ್ಲ ನಿಂತು ಇವರಿಬ್ಬರ ಬರುವಿಕೆಗಾಗಿ ಕಾಯುತ್ತಾ ಇದ್ದೆವು. 
ಬಂದರು ಎಂಎಲ್ಎ ಸಾಹೇಬರು ಮತ್ತು ಬಿಇಓ ಇಬ್ಬರೂ . ಎಂಎಲ್ಎ ಸಾಹೇಬರು ಮಕ್ಕಳ ಓದಿನ ಮತ್ತು ಫಲಿತಾಂಶದ ಬಗ್ಗೆ ನಮ್ಮನ್ನು ವಿಚಾರಿಸಲಾಗಿ ಕಳಿಸಿದರು. 
ಎಂಎಲ್ಎ : " ಏನ್ರಪ್ಪಾ , ಪಾಟ ಗೀಟ ಎಲ್ಲಾ ಚೆನ್ನಾಗಿ ನಡೀತಿದಿಯೋ ? " 
ಹೆಚ್ ಎಂ " ಹ್ಞಾಂ ಎಲ್ಲಾ ಸರಿಯಾಗಿ ನಡೀತಿದೆ ಸಾರ್ " 
ಎಂಎಲ್ಎ : ನೀನ್ ಸುಮ್ನಿರಪ್ಪಾ ಮೇಷ್ಟ್ರು ಮೇಡಂಗುಳು ಹೇಳ್ಳಿ " 
ಮೇ ಮೇ " ನಡೀತಿದೆ ಸಾರ್. ಸರಿಯಾಗೇ ನಡೀತಿದೆ " 
ಎಂಎಲ್ಎ:" ರಿಸಲ್ಟ್ ಎಲ್ಲಾ ಹೆಂಗ್ ಬರ್ತಿದೇ "
ಮೇ ಮೇ : " ನಮ್ಮಲ್ಲಿ ರಿಸಲ್ಟ್ ಹಂಡ್ರೆಡ್ ಪರ್ಸೆಂಟ್ ಸಾರ್ "  
ಎಂಎಲ್ಎ : " ಸಾಲ್ದು . ಏನೇನೂ ‌ಸಾಲ್ದು. ನೀವೆಲ್ಲ ತುಂಬಾ ಕಷ್ಟ ಪಟ್ಟು ಕೆಲಸ ಮಾಡ್ಬೇಕೂ . ಮಕ್ಕಳು ಚೆನ್ನಾಗಿ ಓದಿ ಮುಂದಕ್ಬರ್ಬೇಕೂ . ಇನ್ನೂ ಚೆನ್ನಾಗಿ ಪಾಠ ಮಾಡಿ ಮಕ್ಳಿಗೆ ಸರಿಯಾಗಿ ಹೇಳ್ಕೊಡಿ. ತಿಳೀತಾ " 
ಮೇ ಮೇ : ...........
ಸಭೆ ಮುಗೀತು 
ಅವರೆಲ್ಲಾ ಹೋದಮೇಲೆ ಇವನ ಪಿಂಡ ಹಂಡ್ರೆಡ್ ಪರ್ಸೆಂಟೂ ಸಾಲ್ದಂತೆ . ಕಿತ್ತೋದೋನು " ಅಂತ ಬೈದು ಎಲ್ಲಾ ಬಿದ್ದು ಬಿದ್ದು ನಕ್ಕಿದ್ದೆವು . 
ಮೊನ್ನೆ ಆ ಶಾಲೆಯ ಶಿಕ್ಷಕಿ ಒಬ್ಬರು ಅಚಾನಕ್ಕಾಗಿ ಭೇಟಿಯಾಗಿ ಇಬ್ಬರೂ ಮತ್ತೆ ಅದನ್ನೇ ನೆನಪಿಸಿಕೊಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕೆವು.

ತುಣುಕು ಮಿಣುಕು ೩

ಆಗಿನ್ನೂ ನನ್ನ ಮಗ ತುಂಬಾ ಚಿಕ್ಕವನು ಮಾತು ಇನ್ನೂ ಬರುತ್ತಿರಲಿಲ್ಲ. ಮಾತು ಬರಲಿ ಎಂದು ನನ್ನ ಪತ್ನಿ ಎರಡೆರಡು ಅಕ್ಷರ ಇರುವ ಪದಗಳನ್ನು ಗಾದೆಗಳನ್ನು ಹೇಳಿಕೊಡುತ್ತಿದ್ದಳು ಹೀಗೆ ದಿನವೂ ಅಭ್ಯಾಸ ಮಾಡಿಸುತ್ತಾ ಸುಮಾರು 150 ಗಾದೆಗಳನ್ನು ಕಲಿತು ಬಿಟ್ಟಿದ್ದ. ಮಗ ಈ ಕಡೆ ಮಾತು ಕಲಿಯುತ್ತಿದ್ದರೆ , ಅಪ್ಪನಾದ ನಾನು ನನ್ನ ಸಮಸ್ಯೆಯ ತೀರುವಳಿಗಾಗಿ ಸಾಲಕ್ಕಾಗಿ ಬ್ಯಾಂಕುಗಳನ್ನು ಎಡತಾಕುತ್ತಿದ್ದೆ. ಆಗ ಪರಿಚಯವಾದ ಬ್ಯಾಂಕೊಂದರ ಮ್ಯಾನೇಜರ್ ನ ಸ್ನೇಹಿತರು ನಂತರ ಸ್ವಲ್ಪ ಕಾಲದಲ್ಲೇ ಹಿತೈಷಿಗಳೂ ಆದರು. ಅವರ ಬಳಿ ನನ್ನ ಅವಶ್ಯಕತೆಯನ್ನು ಹೇಳಿಕೊಂಡೆ. ಸಾಲಕ್ಕೆ ಸಂಬಂಧಿಸಿದಂತೆ ಮಾತುಕತೆಗಾಗಿ ಸಂಬಂಧಪಟ್ಟ ಕಾಗದ ಪತ್ರಗಳನ್ನು ತೆಗೆದುಕೊಂಡು ಬರುವಂತೆ ಹೇಳಿದರು. ನಾನು ನನ್ನ ಪತ್ನಿ ಮತ್ತು ಮಗು ಮೂರು ಜನ ಅವರ ಮನೆಗೆ ಹೋದೆವು. ಸ್ವಲ್ಪಹೊತ್ತಿನಲ್ಲೇ ಸಾಲದ ಬಗ್ಗೆ ಮಾತುಕತೆ ಆರಂಭಿಸಿದರು ಹೋಗಬೇಕಾದ ಬ್ಯಾಂಕ್ ಅನುಸರಿಸಬೇಕಾದ ಕೆಲವು ನಿಯಮಗಳು ಇವುಗಳ ಬಗ್ಗೆ ತಿಳುವಳಿಕೆ ನೀಡಲಾರಂಭಿಸಿದರು. ಎಲ್ಲವನ್ನೂ ಮುಗಿಸಿ ಇನ್ನೇನು ನಾವು ಅವರ ಮನೆ ಬಿಟ್ಟು ಹೊರಡಬೇಕು ಎನ್ನುವಷ್ಟರಲ್ಲಿ ಅವರು" ಅಯ್ಯೋ ನಮ್ಮ ಪುಟ್ಟೂನೆ ಮಾತಾಡಿಸಲಿಲ್ಲ. ಏನೋ ಪುಟ್ಟ ಏನ್ ಸಮಾಚಾರ " ಅಂತ ಕೇಳಿದ್ರು. ನಾವು ಅವನಿಗಿನ್ನೂ ಮಾತು ಸರಿಯಾಗಿ ಬರುವುದಿಲ್ಲ ಎಂದೆಲ್ಲಾ ಹೇಳಬೇಕು ಎನ್ನುವಷ್ಟರಲ್ಲಿ ಪಟ್ಟನೆ ಮುದ್ದು ಮುದ್ದಾಗಿ ನುಡಿದ " ಕೊಟ್ಟ ಸಾಲ ಕೇಳ ಬೇಡ" . ಮೂರು ಜನ ಉರುಳಾಡಿ ನಕ್ಕಿದ್ದೆವು. ಅವರು " ಸರಿಯಾದ ಆಸಾಮಿ ಕಣ್ರೀ " ಎಂದು ಹೇಳಿ ಅಂಗಡಿಯಿಂದ ಚಾಕ್ಲೆಟ್ ತರಿಸಿ ಕೊಟ್ಟು ಮುದ್ದುಮಾಡಿ ಕಳಿಸಿದರು. ಈಗಲೂ ಭೇಟಿಯಾದಾಗ ಅದನ್ನೇ ನೆನಪಿಸಿಕೊಂಡು ನಗುತ್ತಿರುತ್ತಾರೆ. 

ತುಣುಕು ಮಿಣುಕು ೪ 

ನಾನು ಚಿಕ್ಕವನಿದ್ದಾಗ ನಡೆದ ಘಟನೆ. ಮನೆಯಿಂದ ಶಾಲೆಗೆ ಅಥವಾ ಪೇಟೆಗೆ ಹೋಗಿ ಬರುವಾಗ ಕೆಲವರು ಬೀಡಿ ಸಿಗರೇಟು ಸೇದುತ್ತಾ ಬಾಯಿಂದ ಹೊಗೆ ಬಿಡುವುದನ್ನು ಅವ್ಯಕ್ತ ಕುತೂಹಲದಿಂದ ನೋಡುತ್ತಿದ್ದೆ. ನಾನೂ ಹಾಗೆ ಬಾಯಿಂದ ಹೊಗೆ ಬಿಟ್ಟರೆ ಹೇಗಿರುತ್ತದೆ ಎನ್ನುವ ಕಲ್ಪನೆಯೇ ಬೇರೆ ಲೋಕಕ್ಕೆ ಕೊಂಡೊಯ್ಯುತ್ತಿತ್ತು. ಅಪ್ಪ ಅಮ್ಮನನ್ನು ಕೇಳಲು ಭಯ . ತಪ್ಪೋ ಸರಿಯೋ ಗೊತ್ತಿಲ್ಲ. ಆದರೆ ಕುತೂಹಲ ಎಷ್ಟಾಗಿತ್ತೆಂದರೆ ಆದಷ್ಟು ಬೇಗ ಈ ಸಾಧನೆ ಮಾಡಿ ಮುಗಿಸಿಬಿಡಬೇಕು ಎನ್ನಿಸಿತ್ತು. ಒಂದು ದಿನ ಬೆಳಿಗ್ಗೆ ಅಮ್ಮ ಮನೆಯಿಂದ ಹೊರಗೆ ಹೋದರು. ಇದೇ ಸರಿಯಾದ ಸಮಯ ಎಂದುಕೊಂಡು ನಾನು ದೇವರ ಮೂರ್ತಿಯ ಎದುರು ಹಚ್ಚಿಟ್ಟಿದ್ದ ಊದಿನಕಡ್ಡಿಯನ್ನು ಬಾಯೊಳಗೆ ಬಾಯಿಸುಡದ ಹಾಗೆ ಕೆಲಸಮಯ ಬಾಯಿತುಂಬಾ ಹೊಗೆ ತುಂಬಿಕೊಳ್ಳುವ ವರೆಗೂ ಇಟ್ಟುಕೊಂಡು ಊದಿನಕಡ್ಡಿಯನ್ನು ತುಂಬಾ ಹುಷಾರಾಗಿ ಹೊರಗೆ ತೆಗೆದು ಬಾಯಲ್ಲಿ ತುಂಬಿದ್ದ ಹೊಗೆಯನ್ನು ನಿಧಾನವಾಗಿ ಹೊರಬಿಟ್ಟೆ. ಜಗತ್ತನ್ನೇ ಗೆದ್ದ ಭಾವ. ಊದಿನಕಡ್ಡಿ ಆರಿದರೆ ಹಚ್ಚಿಕೊಂಡು ಮತ್ತೆ ಮತ್ತೆ ಮಾಡುತ್ತಾ ನನ್ನ ಲೋಕದಲ್ಲೇ ಮೈಮರೆತಿದ್ದೆ . 
ಎಲ್ಲೆಂದರಲ್ಲಿ ಲೆಕ್ಕವೇ ಇಲ್ಲದಂತೆ ಸೀಬೇಮರದ ಕೋಲಿನಿಂದ ರಪ್ ರಪ್ ಎಂದು ಮೈಮೇಲೆ ಏಟುಗಳು ಬೀಳಲಾರಂಭಿಸಿದವು. " ಎಷ್ಟು ದಿನದಿಂದ ನಡೀತಿದೆ ಈ ದರಿದ್ರ ಹೊಲಸು ಕೆಲಸ ? ನನ್ನ ಪ್ರಾಣ ತಿನ್ನೋಕೇ ಹುಟ್ಟಿದೀಯಾ ಅನಿಷ್ಟ ಮುಂಡೇದೇ . ಇನ್ನೊಂದು ಸಲ ನೋಡಿದೀನಿ ಅನ್ನೋ ಅನುಮಾನ ಬಂದ್ರೂ ನಿನ್ನ ಹುಟ್ಲಿಲ್ಲಾ ಅನ್ನಿಸ್ಬಿಡ್ತೀನಿ ಪಾಪಿಮುಂಡೇದೆ. ಒಳ್ಳೇದ್ ಕಲಿ ಅಂದ್ರೆ ಬರೀ ಇಂಥದೇ ಕಲೀತೀಯಾ ." ಅಂತ ಅಮ್ಮ ಮನಸೋ ಇಚ್ಛೆ ಬಾರಿಸಿದ್ದು ಸಿಗರೇಟು ಬೀಡಿ ಸೇದುವವರನ್ನು ನೋಡುವಾಗ ನೆನಪಾಗುತ್ತದೆ. 

ತುಣುಕು ಮಿಣುಕು ೫ 

ಹತ್ತಿರದ ಸಂಬಂಧಿಕರ ಮನೆಯ ಗೃಹ ಪ್ರವೇಶ. ಬೆಳಿಗ್ಗೆಯಿಂದ ಅವರು ಹೊಸ ಮನೆಯ ಪೂಜೆ ಪುನಸ್ಕಾರದಲ್ಲಿ ಪಾಲ್ಗೊಂಡೆವು. ಊಟದ ಸಮಯಕ್ಕೆ ಸ್ವಲ್ಪ ಮುಂಚೆ ಒಂದು ಮುದ್ದಾದ ಸುಮಾರು ಮೂರು ವರ್ಷ ವಯಸ್ಸಿನ ಹೆಣ್ಣು ಮಗುವಿನ ಹಿಂದೆ ಸುತ್ತಾಡುತ್ತಾ ಅವರಮ್ಮ ಊಟ ಮಾಡಿಸಲು ಹೆಣಗುತ್ತಿದ್ದಳು. ನಾವೆಲ್ಲರೂ ಊಟಕ್ಕೆ ಕುಳಿತುಕೊಳ್ಳಲಾರಂಭಿಸಿದ್ದೆವು. ಆ ಮಗು ಏನ್ಬೇಕಾದ್ರೂ ತಿನ್ಸು ಆದ್ರೆ ಲಾಡು ಮಾತ್ರ ಬೇಡ ಅಂತ ಮುದ್ದು ಮುದ್ದಾಗಿ ಹೇಳಿತು. ಎಲ್ಲರೂ ಅದನ್ನು ಕೇಳಿಸಿಕೊಂಡು ಎಂಜಾಯ್ ಮಾಡ್ತಿದ್ವಿ. ಎಲೆ ಹಾಕಿ ಊಟ ಬಡಿಸಲು ಆರಂಭಿಸಿದರು . ಈ ಮಗು ಲಾಡು ತಿಂಬೇಡೀ ಲಾಡೂ ತಿಂಬೇಡೀ ಅಂತ ಜೋರಾಗಿ ಹೇಳೋಕೆ ಶುರು ಮಾಡ್ತು. ಅಲ್ಲೇ ಬಡಿಸಲು ಬಂದಿದ್ದ ಅಡಿಗೆಯವನು ಯಾಕೆ ಬಂಗಾರಾ ಲಾಡೂ ತಿನ್ಬೇಡೀ ಅಂತ ಎಲ್ರಿಗೂ ಹೇಳ್ತಿದೀಯಾ ಅಂದ . ಯಾಕೇಂದ್ರೆ ಅದು ನೆನ್ನೆ ಮಾಡಿದ್ದು. ತಂಗಳು. ತಂಗಳು ಯಾರಾದ್ರೂ ತಿಂತಾರಾ ಅಂತ ತನ್ನ ಬಟ್ಟಲುಗಣ್ಣುಗಳನ್ನು ಜೋರಾಗಿ ಬಿಡುತ್ತಾ ಕೇಳಿದಾಗ ಅಡಿಗೆಯನ್ನೂ ಸೇರಿದಂತೆ ನಾವೆಲ್ಲ ಬಿದ್ದೂ ನಕ್ಕಿದ್ದೆವು . 
ತುಣುಕು ಮಿಣುಕು - ೬

ನನ್ನ ಮಗ ಯುಕೆಜಿ ಯಲ್ಲಿ ಓದುತ್ತಿದ್ದಾಗಿನ ಸಮಯ . ಒಂದು ದಿನ ಸಂಜೆ ನಾನು ನನ್ನ ಪತ್ನಿ ಮತ್ತು ನನ್ನ ಮಗ ಮೂರೂ ಜನ ರಾಯರ ಮಠಕ್ಕೆ ಹೋಗಿ ವಾಪಸ್ಸು ಬರುವಾಗ ನನ್ನ ಮಗನನ್ನು ಭುಜದ ಮೇಲೆ ಕೂರಿಸಿಕೊಂಡು ಬರುತ್ತಿದ್ದೆ. ನನ್ನ ಪತ್ನಿ ಅಂದು ಇವನು ತನ್ನ ಶಾಲೆಯಲ್ಲಿ ಏನೋ ಗಲಾಟೆ ಮಾಡಿಕೊಂಡು ಯಾರಿಗೂ ಹೊಡೆದು ಬಂದಿದ್ದಾನೆ ಎಂದು ಹೇಳಿದಳು. ನಾನು " ಚಿನ್ನು , ಹಾಗೆಲ್ಲಾ ಜಗಳ ಮಾಡಬಾರದಪ್ಪಾ , ಎಲ್ಲರ ಜೊತೆ ಫ್ರೆಂಡ್ ಆಗಿ ಇರಬೇಕಪ್ಪಾ. ಯಾರ ಜೊತೇನೂ ಜಗಳ ಗಲಾಟೆ ಮಾಡ್ಕೋಬಾರ್ದು. ಯಾರಿಗೂ ಹೊಡೆದು ಬೈದು ಮಾಡ್ಬಾರ್ದೂ ಅಂತ ನಿಧಾನವಾಗಿ ಹೇಳಿದೆ. ಅದನ್ನೆಲ್ಲಾ ಮೌನವಾಗಿ ಕೇಳಿಸಿಕೊಳ್ಳುತ್ತಿದ್ದ ನನ್ನ ಮಗ ಒಂದೇ ಒಂದು ಮಾತು ಆಡಿದ . ಆ ಮಾತಿಗೆ ನನ್ನ ಪತ್ನಿ ಇಡೀ ದಿನ ನಕ್ಕಿದ್ದಳು. ನಾನು ಬಾಯಿಮುಚ್ಚಿಕೊಂಡು ತೆಪ್ಪಗಾದೆ. ಅಪ್ಪನ ಬಾಯನ್ನೇ ಮುಚ್ಚಿಸುವಂಥಾ ಮಾತು ಯಾವುದದು ಅವನು ಹೇಳಿದ್ದು ? 
ತಂದೆಯಂತೆ ಮಗ ಮತ್ತು ರಾಜನಂತೆ ಪ್ರಜೆ 
ಈಗಲೂ ನೆನೆಸಿಕೊಂಡರೆ ನಗು ಬರುತ್ತದೆ. 

ತುಣುಕು ಮಿಣುಕು ೭ 

ನೆನ್ನೆ ಅಂದರೆ ೭/೨/೨೦೨೦ ಶುಕ್ರವಾರದಂದು ನಡೆದ ಘಟನೆ. ನನ್ನ ದೊಡ್ಡಪ್ಪನ ಮೊಮ್ಮಗಳ ನಿಶ್ಚಿತಾರ್ಥ ನಡೆದಿತ್ತು. ನಾವೆಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಊಟದ ಸಮಯಕ್ಕೆ ಊಟದ ಟೇಬಲ್ ಮುಂದೆ ಕುಳಿತು ಊಟ ಮಾಡುತ್ತಿದ್ದೆವು . ನನ್ನಿಂದ ಸ್ವಲ್ಪ ದೂರದಲ್ಲಿ ಒಂದು ಚಿಕ್ಕ ಹುಡುಗಿ ಅದರ ಅಜ್ಜಿಯ ಜೊತೆ ಊಟಕ್ಕೆ ಕುಳಿತಿತ್ತು. ತುಂಬಾ ಚೂಟಿ ಅದು. ಮುದ್ದು ಮುದ್ದು ಮುದ್ದಾಗಿ ಒಂದು ಕ್ಷಣವೂ ಸುಮ್ಮನಿರದೇ ಮಾತಾಡುತ್ತಾ ಇತ್ತು. ಅಡಿಗೆಯವರಲ್ಲಿ ಒಬ್ಬರು ತಮಾಷೆಯಾಗಿ ಹಸನ್ಮುಖಿಯಾಗಿ ಬಡಿಸುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಎಲ್ಲರೂ ಜೋರಾಗಿ ನಗಲಾರಂಭಿಸಿದರು. ನಮಗೂ ವಿಷಯ ಏನೆಂದು ತಿಳಿಯಲಿಲ್ಲ. ವಿಷಯ ತಿಳಿದ ಬಳಿಕ ನಮಗೂ ನಗೆ ತಡೆಯಲಾಗಲಿಲ್ಲ . 
ಆ ಹಸನ್ಮುಖಿ ಅಡಿಗೆಯವರು ಎಲ್ಲರನ್ನೂ ಬಿಟ್ಟು ಈ ಮಗುವನ್ನು ಅಡಿಗೆ ಹೇಗಿದೆ ಪುಟ್ಟಾ ಎಂದು ಕೇಳಿದರು. ಈ ಮಗು " ಅಂಕಲ್ ಉಪ್ಪು ಮಾತ್ರ ತುಂಬಾ ಚೆನ್ನಾಗಿ ಮಾಡಿದ್ದೀರಾ. ಬೇರೇನೂ ಚೆನ್ನಾಗಿಲ್ಲ " ಅಂತ ಬಾಲಭಾಷೆಯಲ್ಲಿ ಹೇಳಿದಾಗ ಆತ ಅಡಿಗೆಯವರು ಏನೂ ಹೇಳಲಾಗದೇ ಒಂದು ಕ್ಷಣ ಕಕ್ಕಾಬಿಕ್ಕಿಯಾದರು. 

ತುಣುಕು ಮಿಣುಕು - ೮ 

ಇತ್ತೀಚೆಗೆ ನಾನು ಮತ್ತು ನನ್ನ ಪತ್ನಿ ನಾವು ಬಹಳ ಹಿಂದೆ ವಾಸಿಸಿದ್ಧ ಊರಿಗೆ ಹೋದಾಗ ಒಬ್ಬಳು ತನ್ನ ಗಂಡ ಮತ್ತು ಇಬ್ಬರು ಮಕ್ಕಳೊಂದಿಗೆ ಎದುರು ಬಂದಳು. ಆಕೆಯೇ ತಕ್ಷಣ ಗುರುತು ಹಿಡಿದು " ಸಾರ್ , ನಾನು . ನೆನಪಿದೀನಾ " ಎಂದು ಅತೀವ ಸಂತೋಷದಿಂದ ಕಣ್ಣರಳಿಸಿಕೊಂಡು ಕೇಳಿದಳು . ನನಗೆ ತಕ್ಷಣಕ್ಕೆ ನೆನಪಾಗಲಿಲ್ಲ. ಅವಳು ನೆನಪು ಮಾಡಿಸಲು ಯತ್ನಿಸುವಾಗ ತಕ್ಷಣವೇ ನೆನಪಾಗಿ ಅವಳ ಕಿವಿಯಲ್ಲಿ ಏನೋ ಹೇಳಿದೆ. ಹೌದು ಹೌದು ಎಂದಳು. ಇಬ್ಬರೂ ಬಿದ್ದು ಬಿದ್ದು ನಗುತ್ತಿದ್ದರೆ ಅವಳ ಗಂಡ ಮತ್ತು ನನ್ನ ಪತ್ನಿ ಇಬ್ಬರೂ ನಮ್ಮನ್ನೇ ನೋಡುತ್ತಾ ನಿಂತಿದ್ದರು. ಕಡೆಗೆ ನಾನು " ನೋಡಿ , ನಿಮ್ಮಾಕೆ ನನ್ನ ವಿದ್ಯಾರ್ಥಿನಿ. ಒಮ್ಮೆ ಪರೀಕ್ಷೆ ಯೊಂದರಲ್ಲಿ ಮೂಳೆಗಳು ಗಟ್ಟಿಯಾಗಿ ಇರಲು ದೇಹಕ್ಕೆ ವಿಟಮಿನ್ ಡಿ ಬೇಕು ಎಂದು ಬರೆಯುವ ಬದಲು ಮೂಳೆಗಳು ಗಟ್ಟಿಯಾಗಿ ಇರಲು ವಿಟಾ ದೇಹಕ್ಕೆ ಮಿಂಡಿ ಬೇಕು ಎಂದು ಬರೆದಿದ್ದಳು. " ಎಂದೆ . ಈಗ ನಗುವವರ ಸಂಖ್ಯೆ ಹೆಚ್ಚಾಗಿತ್ತು. ಅವಳ ಮಕ್ಕಳಿಗೆ ಎಷ್ಟು ಅರ್ಥ ಆಯಿತೋ ಏನೋ ಗೊತ್ತಿಲ್ಲ. ಆದರೆ ಅವೂ ನಮ್ಮ ಜೊತೆಗೆ ನಗುತ್ತಿದ್ದವು. 

ತುಣುಕು - ಮಿಣುಕು ೯

ಬಹಳ ವರ್ಷಗಳ ಹಿಂದಿನ ಮಾತು. ನಾವು ಮನೆ ಕಟ್ಟಿಸುತ್ತಿದ್ದೆವು. ಮೋಲ್ಡು ಹಾಕಿ ಮೇಲೆ ಸಿಮೆಂಟಿನಲ್ಲಿ ಚಿಕ್ಕ ಚಿಕ್ಕ ಬದುಗಳನ್ನು ನಿರ್ಮಿಸಿ ಅದರಲ್ಲಿ ನೀರನ್ನು ತುಂಬಿಸಿದರೆ ಕ್ಯೂರಿಂಗ್ ಗೆ ಸಹಾಯಕ ಎಂದು ಮೇಸ್ತ್ರಿ ಹಾಗೆಯೇ ಮಾಡಿದ್ದ. ನನ್ನ ಮಗ ಆಗ ತುಂಬಾ ಚಿಕ್ಕವನು. ಸ್ವಲ್ಪ ಮಾತು ಬರುತ್ತಿತ್ತು . . ಅವನಿಗೆ ಇಂಥದ್ದೆಲ್ಲಾ ತುಂಬಾ ಇಷ್ಟ. ಮಾರನೇ ದಿನ ಸಂಜೆ ಮೇಸ್ತ್ರಿ ಮನೆಗೆ ಬಂದ. ನಾನು ನನ್ನ ಮಗ ಮತ್ತು ಮೇಸ್ತ್ರಿ ಮೂವರೂ ತಾರಸಿಗೆ ಹೋದೆವು . ತನ್ನ ಪುಟ್ಟ ಕಾಲುಗಳಿಂದ ನಿಂತ ನೀರಲ್ಲಿ ಆಟವಾಡುತ್ತಾ. " ಹ್ಞಾಂ ಚಮುದಾ " ಅವನು ತೆಗೆದ ಉದ್ಗಾರ ನಾನು ಮತ್ತು ಮೇಸ್ತ್ರಿ ಬಿದ್ದು ಬಿದ್ದು ನಗುವಂತೆ ಮಾಡಿತ್ತು. ಮೇಸ್ತ್ರಿಯಂತೂ " ಇದೇ ಸಮುದ್ರನಾ ಚಿನ್ನವೂ " ಎಂದು ಹೇಳಿಕೊಂಡು ಮತ್ತೂ ನಕ್ಕ . 

ತುಣುಕು - ಮಿಣುಕು ೧೦. 

ನನ್ನ ಮಗ ತುಂಬಾ ಚಿಕ್ಕವನಾಗಿದ್ದಾಗ ನಡೆದ ಘಟನೆ . ಬಹುಶಃ ಆಗತಾನೇ ಅವನು ಪ್ರಾಣಿಗಳು ಪಕ್ಷಿಗಳನ್ನು ಚಿತ್ರದಲ್ಲಿ ನೋಡಿ ಕಲಿಯುತ್ತಿದ್ದ ಕಾಲ . ನನ್ನ ಪತ್ನಿ ಮತ್ತು ಮಗ ಅಂಗಡಿಗೆ ಸಾಮಾನು ತರಲೆಂದು ಹೋದವರು ಮರಳಿ ಬರುವಾಗ ಒಂದು ಕಜ್ಜಿನಾಯಿಮರಿ ಕುಂಟುತ್ತಾ ಇವರ ಮುಂದೆ ಹೋಯಿತಂತೆ . ಅದನ್ನು ಕಂಡವನೇ ನನ್ನ ಮಗ " ಹ್ಞಾಂ ಲೆಪರ್ಡ್ " ಎಂದು ಅವರಮ್ಮನ ಬಳಿ ಹೇಳಿದ್ದ. ಅದನ್ನು ಕೇಳಿ ನಾವಿಬ್ಬರೂ ಬಹಳ ಹೊತ್ತು ನಕ್ಕಿದ್ದೆವು. 

ತುಣುಕು ಮಿಣುಕು ೧೧

ಆಟೋದಲ್ಲಿ ಪ್ರಯಾಣಿಸುತ್ತಿದ್ದೆ. ಬಲಗಡೆಯ ಚಕ್ರವೊಮ್ಮೆ ಗುಂಡಿಗೆ ಇಳಿದು ಧಡಾರನೆ ಸದ್ದು ಮಾಡಿ ನನ್ನನ್ನು ಎತ್ತಿ ಹಾಕಿದರೆ ಎಡಗಡೆಯದು ಇನ್ನೊಮ್ಮೆ. ಹೀಗೇ ಕೆಲವು ಸಲ ಆದ ಮೇಲೆ ನನಗೆ ಪಕ್ಕೆ ಹಿಡಿದುಕೊಂಡು ನೋವು ಬರಲಾರಂಭಿಸಿತು. ನಾನು ಆಟೋ ಡ್ರೈವರ್ ಗೆ " ಏನಪ್ಪಾ , ಗಾಡಿಯನ್ನು ಗುಂಡಿಯಲ್ಲಿ ಹೀಗೆ ಇಳಿಸಿದರೆ ಹೇಗೆ ? " ಎಂದೆ. " ಓನರ್ ನನ್ಮಗ ಬಲೇ ಕಂಜ್ಯೂಸು ಸಾರ್. ಕಾಸ್ ಬಿಚ್ಚಕ್ಕೇ ಸಾಯ್ತಾನೆ. ಅದೇ ಗಾಡಿ ಹಾಳಾದ್ರೆ ಎಷ್ಟು ಬೇಕಾದ್ರೂ ಖರ್ಚು ಮಾಡ್ತಾನೆ. ಈ ಗಾಡಿ ರಿಪೇರಿ ಮಾಡೋ ಮೆಕಾನಿಕ್ ಜೊತೆ ಅಂಡರ್ ಸ್ಟ್ಯಾಂಡಿಂಗ್ ಮಡಿಕ್ಕಂಡಿದೀನಿ. ಗಾಡಿ ಹಾಳಾದ್ರೆ ರಿಪೇರಿಗೋದ್ರೆ ನಂಗೂ ಸ್ವಲ್ಪ ಕಾಸಾಯ್ತದೆ " ಅಂದ. 
ಇವನಿಗೆ ಕಾಸಾಗೋಕೆ ನಾನು ಪಕ್ಕೆ ಉಳುಕುಸ್ಕೋಬೇಕಾ ? 

ತುಣುಕು ಮಿಣುಕು ೧೨

ಬಲಿಪಾಡು ಬೇಡ 
ಬಹಳ ವರ್ಷಗಳ ಹಿಂದಿನ ಮಾತು. ನನ್ನ ಮಗ ಆಗ ತಾನೇ ಎರಡೆರಡು ಅಕ್ಷರಗಳ ಪದಗಳನ್ನು ಮಾತನಾಡುತ್ತಿದ್ದ. ದೀಪಾವಳಿ ಹಬ್ಬ ಬಂದಾಗ ಬಲಿ ಪಾಡು ಬೇಡ ಅಂದ. ಏಕೆ ಮಗು ಹೀಗೆ ಹೇಳುತ್ತದೆ ಎಂದು ಎಷ್ಟು ತಲೆಕೆರೆದುಕೊಂಡರೂ ಹೊಳೆಯಲಿಲ್ಲ. ನಿಧಾನವಾಗಿ ತಿಳಿಯಿತು. ದೀಪಾವಳಿ ಹಬ್ಬಕ್ಕೆಂದು ಪಟಾಕಿ ತಂದು ಎಲ್ಲಾ ಮೊದಲ ದಿನವೇ ಹೊಡೆಯಬೇಡ. ಬಲಿಪಾಡ್ಯಮಿ ಗೂ ಇಟ್ಟುಕೋ ಎಂದು ನನ್ನವಳು ಮಗನಿಗೆ ಹೇಳಿದ್ದಕ್ಕೆ ಮಗರಾಯ ಬಲಿಪಾಡ್ಯಮಿವರೆಗೂ ಕಾಯೋದು ಬೇಡ ಇವತ್ತೇ ಎಲ್ಲಾ ಮುಗಿಸಿ ಬಿಡ್ತೀನಿ ಎನ್ನುವುದನ್ನು ತನ್ನ ಬಾಲ ಭಾಷೆಯಲ್ಲಿ ಹೇಳಿದ ರೀತಿ. ಈಗಲೂ ನೆನಪಾಗಿ ನಗು ಬರುತ್ತದೆ. 

ತುಣುಕು ಮಿಣುಕು ೧೩

ಸ್ನೇಹಿತರೆಲ್ಲಾ ಮಾತನಾಡುತ್ತಾ ಕುಳಿತಿದ್ದೆವು. ಸಂಬಳದ ವಿಚಾರವೂ ನುಸುಳಿತು. ನಮ್ಮಲ್ಲೊಬ್ಬನೆಂದ. ನಮ್ಮ ಸಂಬಳ ಜಾಸ್ತಿ ಹೇಳಿಕೊಂಡೆ ಅನ್ಕೋ. ಸಾಲ ಕೇಳ್ತಾರೆ. ವಾಪಸ್ ಕೊಡೋದಿಲ್ಲ. ಬರೋ ಸಂಬಳಾನೇ ಮುಚ್ಚು ಮರೆ ಇಲ್ಲದೆ ಹೇಳ್ದೇ ಅನ್ಕೋ. ಮರ್ಯಾದೆನೇ ಬರೋದಿಲ್ಲ ಅಂದ . ಎಲ್ಲರೂ ನಕ್ಕೆವು 

ತುಣುಕು - ಮಿಣುಕು ೧೪

ಕೇಳಬಾರದಿತ್ತು 
ಎಂದಿನಂತೆ ಅಂದೂ ಕೂಡ ಬೆಳಗ್ಗೆ ಶಾಲೆಗೆ ಹೊರಟೆ. ಎದುರಿಗೆ ಪಕ್ಕದ ಮನೆಯ ಹುಡುಗಿ ಕೇಸರಿ ಬಣ್ಣದ ಹಾಲಿನ ಪ್ಯಾಕೆಟ್ ಹಿಡಿದುಕೊಂಡು ಬರುತ್ತಿದ್ದಳು. 
ನಾನು ತಮಾಷೆಗೆ " ಪುಟ್ಟಿ , ಇಷ್ಟು ಹೊತ್ತಿಗೆ ಹಾಲು ತಂದರೆ ನಾನು ಕಾಫಿ ಕುಡಿಯೋದು ಯಾವಾಗ ? " ಎಂದೆ. 
" ಇದು ನಾಯಿಗೆ ಹಾಕೋಕೆ ಅಣ್ಣಾ " ಅಂದಳು 
ಬಾಯ್ ಮುಚ್ಕೊಂಡು ಇರ್ಬೇಕಿತ್ತು ನಾನು. 

Thursday, May 9, 2019

ಗಡ್ಡದ ಭೂತ

ಗಡ್ಡದ ಭೂತ

ಸಹೋದ್ಯೋಗಿ ಒಬ್ಬರು ಸಾರ್ ತುಂಬಾ ಕಾಫಿ ಒಳ್ಳೇದಲ್ಲಾ ಸಾರ್ . ಎಲ್ಲಾ ತಿಳಿದಿರೋರು ನಿಮಗೆ ಹೇಳಬೇಕೆ ಎಂದರು .

ಛೇ ಎಂಥಾ ಪರಿಸ್ಥಿತಿ ಬಂತಯ್ಯಾ .

ಹೆಣ್ಣು ಮಕ್ಕಳಿಗೆ ಅರಿಷಿಣ ಕುಂಕುಮ ಹೇಗೋ ನಮಗೆ ಗಂಡುಮಕ್ಕಳಿಗೆ ಕಾಫಿ ಹಾಗೆ.

ಅದನ್ನೇ ಒಳ್ಳೇದಲ್ಲಾ ಎಂದು ಹೇಳಿ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಸಿದರಲ್ಲಾ ಎಂದು ನನ್ನ ಸಹೋದ್ಯೋಗಿ ಮೇಲೆ ನವಿರಾದ ಅಸಹಾಯಕ ಕೋಪ ಬಂತು .

ತಡೆದು ಕೊಂಡೆ.

ಮನೆಗೆ ಬಂದು ನನ್ನ ಪ್ರಿಯ ಪತ್ನಿಯ ಬಳಿ ನನ್ನ ಸಹೋದ್ಯೋಗಿಯ ಹಿತವಚನ ಹೇಳಿದೆ .

ನಿಮಗೆ ಎಷ್ಟೋ ದಿನಗಳಿಂದ ಹೇಳಬೇಕೆಂದುಕೊಂಡಿದ್ದೆ .

ನನ್ನ ಮಾತು ನೀವೆಲ್ಲಿ ಕೇಳುತ್ತೀರಾ ಎಂದುಕೊಂಡು ಸುಮ್ಮನಾಗಿದ್ದೆ.

ನಿಮಗೆ ಬೇರೆಯವರು ಹೇಳಿದರೇ ಹಿತವಾಗಿರುತ್ತದೆ ಅಲ್ಲವೇ ಎಂದು ಮೂತಿ ತಿವಿದಳು .

ಮನೆಯಲ್ಲಿ ಇವಳದೇ ರಾಜ್ಯ ಭಾರವಾದರೂ ಈ ಮಾತಿಗೇನೂ ಕೊರತೆ ಇಲ್ಲ .

ಇದು ತಲೆಯಲ್ಲಿ ತುರಿಕೆ ಆಯಿತೆಂದು ಉರಿಯುವ ಕೊಳ್ಳಿಯಿಂದ ತಲೆ ತುರಿಸಿಕೊಂಡ ಹಾಗಾಯಿತು .

ಸರಿ. ಇಷ್ಟ ಇಲ್ಲ ದಿದ್ದರೂ ಕಾಫಿಯ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ.

ಕೆಲವು ದಿನಗಳ ಬಳಿಕ ರೀ ತುಂಬಾ ಕೋಪ ಒಳ್ಳೆಯದಲ್ಲರೀ.

ಅದು ನಿಮ್ಮ ಹೃದಯದ ಮೇಲೆ ಮೂತ್ರ ಪಿಂಡದ ಮೇಲೆ ಪರಿಣಾಮ ಬೀರುತ್ತದೆ .

ಸಣ್ಣ ಪುಟ್ಟ ವಿಷಯ ಗಳಿಗೂ ಕೋಪ ಮಾಡಿಕೊಳ್ಳುವುದನ್ನು ಆದಷ್ಟೂ ಅವಾಯ್ಡ್ ಮಾಡಿ ಎಂದು ತಾನೂ ಉಪದೇಶಿಸಿದ್ದಲ್ಲದೇ ಮನೆಗೆ ಬಂದಿದ್ದ ಒಬ್ಬ ಡಾಕ್ಟರ್ ಅತಿಥಿಯಿಂದಲೂ ಪ್ರವಚನ ಕೊಡಿಸಿದಳು .

 ತಾನು ಕೋಪ ಮಾಡಿಕೊಳ್ಳುವುದರ ಬಗ್ಗೆ ಚಕಾರ ಕೂಡಾ ಎತ್ತಲಿಲ್ಲ.

ತಾನು ತುಂಬಾ ಸಮಾಧಾನಿ ಎನ್ನುವುದನ್ನು ಆ ಅತಿಥಿ ಡಾಕ್ಟರ್ ಬಾಯಿಂದ ಹೇಳಿಸಿ ಗೆದ್ದು ಬಿಟ್ಟಳು.

 ಹೀಗೆ ನನ್ನ ಜೀವನದಲ್ಲಿ ಅದನ್ನು ಬಿಡು ಇದನ್ನು ಹಿಡಿ ಅದು ಒಳ್ಳೆಯದಲ್ಲಾ ಇದರಿಂದ ಪ್ರಯೋಜನ ಇಲ್ಲ ಎನ್ನುವ ಸಲಹೆಗಳನ್ನು ( ಅನವಶ್ಯಕ ವಾದರೂ ) ಪಡೆಯುತ್ತಾ ಬರುತ್ತಿದ್ದ ನನಗೆ ಇದ್ದಕ್ಕಿದ್ದಂತೆ  ಥೋ ನನ್ನ ಬದುಕಿನಲ್ಲಿ ಸ್ವಾತಂತ್ರ್ಯ ವನ್ನೇ ಕಳೆದುಕೊಂಡು ಸ್ವತಂತ್ರ ಭಾರತದಲ್ಲಿ ಪರತಂತ್ರ ಜೀವಿಯಾಗಿ ಬದುಕುತ್ತಿದ್ದೇನಲ್ಲಾ ಎನ್ನಿಸಲಾರಂಭಿಸಿತ್ತು.

ಇದೇ ಯೋಚನೆಯಲ್ಲೇ ಕಾಲ ಸರಿದು ಬೇಸಿಗೆ ರಜೆ ಆರಂಭವಾಯಿತು.

ಇದ್ದಿದ್ದರಲ್ಲಿ ಸ್ವಲ್ಪ ಮಟ್ಟಿಗೆ ಚೆನ್ನಾಗಿ ಗಡ್ಡ ಬೆಳೆದಿತ್ತು

ಆರಂಭವಾಯಿತು

ಪತ್ನಿಯ ಒಂದೇ ವರಾತ.

ರೀ ಶೇವ್ ಮಾಡಿಕೊಂಡು ಟ್ರಿಮ್ ಆಗಿ ಇರಲು ನಿಮಗೇನು ಧಾಡಿ ? ನೀವು ಗಡ್ಡ ಬಿಟ್ಟರೆ ಎಷ್ಟು ಕೆಟ್ಟದಾಗಿ ಕಾಣುತ್ತೀರ ಗೊತ್ತಾ.

ಯಾವುದಾದರೂ ಫಂಕ್ಷನ್ ಗೆ ಹೋಗಬೇಕೆಂದಾಗ ಹೀಗೆ ಹೋದರೆ ಚೆನ್ನಾಗಿರುತ್ತದಾ ಎಂದು ಎಮೋಷನಲ್ ಬ್ಲಾಕ್ ಮೇಲ್ ಮಾಡಲಾರಂಭಿಸಿದಳು .

ನನ್ನ ದಾಡಿಯ ಮೇಲೆ ನಿನಗೇಕೆ ಕಣ್ಣು 
ಮಾಡಿರುವ ಅಡಿಗೆಯನು ತೆಪ್ಪಗೆ ಉಣ್ಣು
ನನ್ನದೊಂದಾಸೆಯಿದೆ ದಾಡಿಬಿಡಬೇಕು
ಹೇಳು ಅನುಮತಿಗೆಷ್ಟು ಲಂಚ ಕೊಡಬೇಕು

ಎಂದೆ .

ನೀವೇ ಮೆಚ್ಚಿಕೋಬೇಕು ನಿಮ್ಮ ಸಾಯಿತ್ಯವನ್ನು ಎಂದು ಮೂಗು ಮುರಿದಳು

ಕಡೇಪಕ್ಷ ಇದೊಂದು ವಿಷಯದಲ್ಲಾದರೂ ಹೆಂಡತಿಯ ಮಾತನ್ನು ಮೀರಿ ನನ್ನ ಧೈರ್ಯ (?)  ಪ್ರದರ್ಶನ ಮಾಡಲೇಬೇಕು ಎನ್ನುವ ಕೆಟ್ಟ ಹಟಕ್ಕೆ ಬಿದ್ದೆ .

ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ನನ್ನ ಮಗನೂ ಬಂದು ಅಪ್ಪ ಶೇವ್ ಮಾಡಿಕೊಳ್ಳಿ ಚೆನ್ನಾಗಿ ಕಾಣುತ್ತೀರಾ ಎಂದು ಹೇಳಿ ಹೋದ.

ಹೋಗಲೇ ನನ್ನಿಂದ ನೀನು , ನಿನ್ನ ಮಾತನ್ನು ಈ ಸಂದರ್ಭದಲ್ಲಿ ಎಳ್ಳಷ್ಟೂ ಕೇಳುವುದಿಲ್ಲ ಎಂದು ಮನಸ್ಸಿನಲ್ಲೇ ಅಂದುಕೊಂಡೆ .
(ಜೋರಾಗಿ ಆಡಿದರೆ ನನಗೇ ಮರಳುವ ಸಾಧ್ಯತೆ ಹೆಚ್ಚಿದ್ದರಿಂದ )

ಇಷ್ಟೆಲ್ಲಾ ಆದ ಎರಡು ದಿನಗಳ ಬಳಿಕ ಸಂಬಂಧಿಕರ ಮಗನ  ಉಪನಯನ ಮಹೋತ್ಸವ ಇತ್ತು. ತುಂಬಾ ಬಲವಂತ ಮಾಡಿ ಆಹ್ವಾನಿಸಿದ್ದರಿಂದ ಹೋಗಲೇ ಬೇಕಾದ ಪರಿಸ್ಥಿತಿ ಎದುರಾಗಿತ್ತು .

ನನ್ನ ಬಹುದಿನಗಳ ಆಸೆ ಕೈಗೂಡುವ ತಕ್ಕ ಸಮಯ ತಾನಾಗಿಯೇ ಒದಗಿ ಬಂದಿತ್ತು .

ರೀ ಕಡೇದಾಗಿ ಕೇಳ್ತಿದ್ದೀನಿ . ಗಡ್ಡ ತೆಗೀತೀರಾ ಇಲ್ವಾ ಎಂದು ಗೃಹಲಕ್ಷ್ಮಿ ಕೇಳಿದಳು

ದನಿಯನ್ನು ಅವಲೋಕಿಸಿದೆ

ವ್ಯಂಗ್ಯ ಸಿಟ್ಟು ಯಾವುದೂ ಇಲ್ಲದ ಸಾಮಾನ್ಯ ಮಟ್ಟದ ಸಮಾಧಾನದ ದನಿಯಾಗಿತ್ತು.

ನಾನೂ ಇದ್ದ ಬದ್ದ ಧೈರ್ಯ (?) ವನ್ನೆಲ್ಲಾ ಒಗ್ಗೂಡಿಸಿಕೊಂಡು ಡಾಕ್ಟರ್ ರಾಜ್ ಕುಮಾರ್ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಜಯಪ್ರದಾ ರವರನ್ನು ಏಯ್ ಚಿನ್ನಾ ಎನ್ನುತ್ತಾರಲ್ಲ ಅದನ್ನೇ ನಕಲು ಮಾಡಿ
ಏಯ್ ಚಿನ್ನಾ , ಇನ್ನೆಷ್ಟು ದಿನ ನಾನು ಗಡ್ಡ ಬಿಡಬಹುದು ಹೇಳು ಎಂದು ಕ್ವಿಜ್ ಸ್ಪರ್ಧೆಯಲ್ಲಿ ಕೇಳುವಂತೆ ಪ್ರಶ್ನೆ ಕೇಳಿದೆ .

ರೀ ಅದೆಲ್ಲಾ ಗೊತ್ತಿಲ್ಲ . ಕೇಳಿದಷ್ಟಕ್ಕೆ ಉತ್ತರ ಕೊಡಿ . ಗಡ್ಡ ತೆಗೀತೀರಾ ಇಲ್ವಾ ಎಂದಳು.

ಓಹೋ ಬೇರೆ ಏನೋ ಖೆಡ್ಡಾ ತಯಾರಾಗ್ತಾ ಇದೆ ಎಂದು ನನ್ನ ಸಿಕ್ಸ್ತ್ ಸೆನ್ಸ್ ( ಅದು ನನಗಿದೆಯೇ ಎಂದು ಕೇಳಬೇಡಿ . ನನಗೂ ಅನುಮಾನ ಇದೆ ) ಹೇಳಲಾರಂಭಿಸಿತ್ತು.

ಧೈರ್ಯಂ ಸರ್ವತ್ರ ಸಾಧನಂ ಎನ್ನುವಂತೆ ಧೈರ್ಯ ಮಾಡಿ ಇಲ್ಲ ನಾನು ಗಡ್ಡ ತೆಗೆಯುವುದಿಲ್ಲ . ಎಂದು ಹೇಳಿ ಏನೀಗ ಎನ್ನುವ ದೃಷ್ಟಿಯನ್ನು ಅವಳೆಡೆಗೆ ಬೀರಿದೆ . ( ನನ್ನ ಹೆಂಡತಿಯ ಮುಂದೆ ಇಷ್ಟು ಹೇಳಲು ಧೈರ್ಯ ಪ್ರಸಾದಿಸಿದ ಆ ದೇವರನ್ನು ತಕ್ಷಣವೇ ವಂದಿಸಿದೆ )

ಅವಳು ನನ್ನ ನೋಟಕ್ಕೆ ಕ್ಯಾರೇ ಎನ್ನದೇ ಅದೇನೋ ಜುಬ್ಬಾ ಹಾಕಿಕೊಂಡು ಹೋದರೆ ಹೇಗ್ಹೇಗೋ ಕಾಣುತ್ತೀರಿ ಎಂದು ಬೀಗುತ್ತಿದ್ರಲ್ಲಾ ಮುಂಜಿಗೆ ಹಾಕಿಕೊಂಡು ಹೋಗೋಕೆ ಬೀರುವಿನಿಂದ ಜುಬ್ಬಾ (ಇದ್ದದ್ದೇ ಒಂದು ) ತೆಗೆದು ಹೊರಗಿಟ್ಟಿದ್ದೇನೆ .
ಆದರೆ ಐರನ್ ಮಾಡಿಕೊಳ್ಳಿ . ಇಲ್ಲ ಮಾಡಿಸಿಕೊಂಡು ಬನ್ನಿ ಎಂದು ಬೇರೆ ಕೆಲಸದಲ್ಲಿ ತೊಡಗಿದಳು .

ಭಲೇ ಭಲೇ ಏನು ಅದೃಷ್ಟನೋ ನಿನ್ನದು . ಸುತರಾಂ ಒಪ್ಪಳು ಎಂದುಕೊಂಡರೆ ಗ್ರೀನ್ ಸಿಗ್ನಲ್ಲೇ ಕೊಟ್ಟು ಬಿಟ್ಟಳಲ್ಲೋ ಎಂದು ಚಿಗರೆಯ ಮರಿಯಂತೆ ಜಿಗಿಯುತ್ತಾ ನನ್ನ ಏಕೈಕ ಜುಬ್ಬಾ ವನ್ನು ನಾನೇ ಶ್ರದ್ಧೆಯಿಂದ ನಿಂತು ಐರನ್ ಮಾಡಿಸಿಕೊಂಡು ಬಂದೆ .( ನಾನು ಮಾಡಲು ಹೋಗಿ ಇರುವ ಒಂದೇ ಜುಬ್ಬಾ ಗೆ ಹೀನಸ್ಥಿತಿ ತಲುಪಿಸಲು ನಾನು ಸಿದ್ಧನಿರಲಿಲ್ಲ ಅದಕ್ಕೆ )

ಆ ಜುಬ್ಬಾ ಹಾಕಿಕೊಂಡು ಮುಂಜಿ ಮನೆಗೆ ಕಾಲಿಟ್ಟರೆ ತುಂಬಾ ಹತ್ತಿರದ ಬಂಧುಗಳಲ್ಲೇ ಕೆಲವರು ಗುರುತೇ ಹಿಡಿಯಬಾರದೇ ?

ಇನ್ನು ಕೆಲವರಂತೂ ಯಾಕೆ ಮೈಗೆ ಯಾ ಮನಸ್ಸಿಗೆ ಹುಷಾರಿಲ್ಲವೇ ಎಂದೆಲ್ಲಾ ಕೇಳಿ ನನ್ನ ಉತ್ಸಾಹವನ್ನೇ ಕುಂದಿಸಲು ಯತ್ನಿಸಿದರು .

ನನ್ನ ಸೋದರತ್ತೆಯ ಮಕ್ಕಳಂತೂ ಏನೋ ಆಗಿದೆ ನಿಂಗೆ ಸ್ವಾಮಿ ಗೀಮಿ ಆಗ್ಬೇಕು ಅಂತ ಮನಸ್ಸು ಮಾಡಿದಿಯೇನೋ ? ಎಲ್ಲೋ ನಿನ್ನ ಕಿತ್ತೋದ ಆಶ್ರಮ ? ಎಷ್ಟು ಜನ ಶಿಷ್ಯರೋ ? ಶಿಷ್ಯರೋ ಶಿಷ್ಯೆಯರೋ ?  ಇನ್ನೂ ಹಲವಾರು ರೀತಿಯಲ್ಲಿ ಪ್ರಶ್ನೆಗಳ ಸುರಿಮಳೆ ಸುರಿದು ಗಾಯ ಮಾಡಿ ಆ ಉರಿಯುವ ಗಾಯಕ್ಕೆ ಉಪ್ಪು ತುಂಬಿದ್ದು ಸಾಲದು ಎಂಬಂತೆ ನನ್ನವಳನ್ನೂ ಕರೆದು ಪ್ರಶ್ನೆಗಳ ಸುರಿಮಳೆ ಗೈದರು .

ನಾನು ಎಲ್ಲವನ್ನೂ ನಗುಮುಖದಿಂದಲೇ ಸಹಿಸುತ್ತಿದ್ದರೆ ನನ್ನ ಹೆಂಡತಿ ನೇರವಾಗಿ ಗಡ್ಡ ಬಿಟ್ಟವರನ್ನು ಕೇಳೋದು ಬಿಟ್ಟು ನನ್ನನ್ನು ಕೇಳಿದರೆ ಏನು ಪ್ರಯೋಜನ ಎಂದು ಹೇಳಿ ಸುಮ್ಮನಾದಳು .

ನಾನೂ ಜಗ್ಗಲಿಲ್ಲ .

ಗಡ್ಡ ಬಿಡುವ ನನ್ನ ಆಸೆ ಎಷ್ಟು ಬಲವಾಗಿತ್ತೆಂದರೆ ಡಿವಿಜಿಯವರ ಚೌಪದಿ ಘನತತ್ವವೊಂದಕ್ಕೆ ದಿನರಾತ್ರಿ ಮನಸೋತು ನೆನಪಾಗಿತ್ತು.

ಇದರಲ್ಲೇನು ಘನತತ್ವ ಇದೆಯೋ ಮೂರ್ಖ ಶಿಖಾಮಣಿ ಎಂದು ನೀವು ಕೇಳಬಹುದು .

ಘನತತ್ವ ಎನ್ನುವುದು ಅವರವರ ಬುದ್ದಿ ಮಟ್ಟಕ್ಕೆ ಅನುಗುಣವಾಗಿ ಆದರ್ಶ ಗಳು ಅವುಗಳನ್ನು ಪಾಲಿಸಲು ಬೇಕಾದ ಬದ್ಧತೆ ಗಳ ಮೇಲೆ ಅವಲಂಬಿತವಾಗಿದೆ ಎಂದು ಯಾರೋ ಮಹನೀಯರು ಬರೆದಿದ್ದುದನ್ನು ಯಾವಾಗಲೋ ಓದಿದ್ದು ಈಗ ಇದ್ದಕ್ಕಿದ್ದಂತೆ ನೆನಪಾಯಿತು.

ಈಗ್ಗೆ ಈ ಕ್ಷಣಕ್ಕೆ ಗಡ್ಡ ಬಿಡುವುದೇ ಘನತತ್ವ ಎಂದು ನನಗೆ ನಾನೇ ತೋಚಿಸಿಕೊಂಡು ಇಂಥದ್ದೊಂದು ಉತ್ತರ ಹೊಳೆದಿದ್ದಕ್ಕೆ ನನ್ನ ಬೆನ್ನನ್ನು ನಾನೇ ತಟ್ಟಿಕೊಂಡೆ .

ಇಷ್ಟಾದ ಮೇಲೆ ಶೇವಿಂಗ್ ಯೋಚನೆಯನ್ನೇ ಕೈಬಿಟ್ಟು ಗಡ್ಡ ಬೆಳೆಸುವುದರಲ್ಲಿ ನಿರತನಾದೆ.

ಬೇರೆ ಎಲ್ಲಾ ಉಪದೇಶ ಸಲಹೆಗಳನ್ನು ಹೇಗೋ ಅರೆಮನಸ್ಸಿನಿಂದಲೇ ಒಪ್ಪಿಕೊಂಡು ಪಾಲಿಸಲಾರಂಭಿಸಿದ್ದೆ.

ಗಡ್ಡ ಬಿಟ್ಟರೆ ಎಷ್ಟು ಚೆನ್ನಾಗಿರುತ್ತದೆ ಮುಖದ ಮೇಲೆ ಒಂದು ವಿಲಕ್ಷಣ ಖಳೆ ಮೂಡುತ್ತದೆ ಎಂದುಕೊಂಡು ಇಷ್ಟ ಪಟ್ಟು ಗಡ್ಡ ಬಿಡಲಾರಂಭಿಸಿದರೇ ಎಲ್ಲರಿಗೂ ನನ್ನ ಗಡ್ಡದ ಮೇಲೇ ಕಣ್ಣು.

ಯಾರದಾದರೂ ಸ್ನೇಹಿತರು , ಬಂಧುಗಳು , ಪರಿಚಯದವರ ಮನೆಗೇನಾದರೂ ಹೋದರೆ ಅಲ್ಲೂ ನನ್ನ ಗಡ್ಡದ ಮೇಲೆ ಸ್ವಲ್ಪ ದೀರ್ಘ ಎನ್ನಬಹುದಾದ ಚರ್ಚೆ.

ಮಗನಿಗೂ ಬೇಸಿಗೆ ರಜೆ ಶುರುವಾಗಿ ಬಹಳ ದಿನಗಳಾಗಿದ್ದು ಅವನನ್ನು ಅಜ್ಜಿ ಮನೆಗೆ ಬಿಟ್ಟು ಬರಲು ಹೋದರೆ ಅಲ್ಲೂ ಅತ್ತೆ ಮಾವನಿಂದ ಗಡ್ಡದ ಮೇಲೇ ಪ್ರಶ್ನೋತ್ತರ ಮಾಲೆ.

ಕಾರಣಕ್ಕೆ ಪ್ರಶ್ನೆ ಸಂಖ್ಯೆ ಪತ್ನಿಯದಷ್ಟಿರಲಿಲ್ಲ ಎನ್ನುವುದು ನನಗೆ ಸಮಾಧಾನ ತಂದರೂ ನನ್ನವಳ ಉತ್ತರ ಅವಳ ಅಪ್ಪ ಅಮ್ಮನ ಬಳಿ ಬೇರೆಯದೇ ಇತ್ತು.

ನಾನೂ ಹೇಳಿ ಹೇಳಿ ಸಾಕಾಯ್ತಮ್ಮ.

ಗಡ್ಡದ ವಿಷಯಕ್ಕೆ ಬಂದರೆ ಸಾಕು ಇವರಿಗೆ ಮೂಗಿನ ತುದಿಗೇ ಕೋಪ ಕುಣಿಯಲಾರಂಭಿಸುತ್ತದೆ ಎಂದು ಹೇಳಿಬಿಟ್ಟಳು.

ಇವರೆಲ್ಲರಿಗೂ ನಾನು ಗಡ್ಡ ಬಿಡುವುದರಿಂದ ಆಗುವ ಸಮಸ್ಯೆಯಾದರೂ ಏನು ಎನ್ನುವುದು ತಿಳಿಯಲಿಲ್ಲ
.
ಏನೋ ಬೇರೆಯವರ ಕಣ್ಣಿಗೆ ಸ್ವಲ್ಪ ವಿಚಿತ್ರವಾಗಿ ಕಾಣಬಹುದೇನೋ .

ಎಂಥೆಂಥವರೋ ಗಡ್ಡದಲ್ಲಿ ಹೇಗೆಲ್ಲಾ ಕಾಣುತ್ತಾರೆ ಅಂಥದ್ದರಲ್ಲಿ ನಾನೇಕೆ ಹಿಂಜರಿಯಬೇಕು ಎಂದುಕೊಂಡೆ

ಅತ್ತೆಯ ಮನೆಗೆ ಮಗ ಮತ್ತು ಪತ್ನಿ ಜತೆಗೆ ಹೋದಾಗ ಅಲ್ಪ ಪರಿಚಯದವರೊಬ್ಬರು  ಎದುರು ಸಿಕ್ಕು ಲೋಕಾಭಿರಾಮವಾಗಿ ಮಾತನಾಡುತ್ತಾ ನಮ್ಮ ಸಂಬಂಧಿಕರೊಬ್ಬರು ಥೇಟು ನಿಮ್ಮ ಹಾಗೆಯೇ ಇದ್ದಾರೆ ಎಂದ

ಓ ಹೌದಾ. ಇರಬಹುದು ಸಾರ್ ಎಂದು ನಾನು ಮಾತು ಮುಂದುವರೆಸುವಷ್ಟರಲ್ಲಿ ಅವರಿಗೆ ಸ್ವಲ್ಪ ಹುಚ್ಚು . ತಪ್ಪಿಸಿಕೊಂಡು ಬಹಳ ತಿಂಗಳೇ ಆದವು . ಎಂದು ಹೇಳಿದಾಗಲಂತೂ ತೀರಾ ಕಸಿವಿಸಿ ಆಗಿ ಅಲ್ಲಿಂದ ಕಾಲ್ಕಿತ್ತೆ

ನಾನು ಕನ್ನಡಿ ಮುಂದೆ ನಿಂತು ನೋಡಿಕೊಂಡಾಗಲೆಲ್ಲಾ ಬುದ್ಧಿ (?) ಜೀವಿಯಂತೆ  ಸಾಹಿತಿಯಂತೆ  ಕಾಣುತ್ತೇನೆ ಎಂದುಕೊಂಡು ಎಷ್ಟು ಖುಷಿ ಪಟ್ಟೆನೋ .

ನನಗೇ ಗೊತ್ತು.

ಹೆಮ್ಮೆಯಿಂದ ಲೇ ಇವಳೇ ಈ ಜುಬ್ಬಾ ಹಾಕಿಕೊಂಡು ಹೊರಗೆ ಕಾಲಿಟ್ಟರೆ ಸಾಕು ಯಾರೋ ಸಾಹಿತಿಗಳಿರಬೇಕು ಎಂದು ಎಷ್ಟು ಗೌರವ ಕೊಡುತ್ತಾರೆ ಗೊತ್ತಾ ಎಂದು ಹೇಳಿದರೆ

ಹೌದು ಹೌದು ದೂರದಿಂದ ನೋಡಿ ಗೌರವ ಕೊಟ್ಟರೂ ಹತ್ತಿರ ಬಂದು ಬಾಯಿ ಬಿಟ್ಟ ಕೂಡಲೇ ಬಂಡವಾಳ ಬಯಲಾಗಿ ಸಿಗುವ ಗೌರವವೇ ಬೇರೆ ಎಂದು ಹೇಳಿ ಕಿಸಕ್ಕನೆ ನಕ್ಕಳು.

ಸತ್ಯವೇ .....

ಆದರೂ ನನ್ನ ಗಡ್ಡದ ಕುರಿತಾದ್ದರಿಂದ ನನಗೆ ಒಪ್ಪಲು ಮನಸ್ಸಾಗಲಿಲ್ಲ .

ಅಪ್ಪ ಅಮ್ಮ ಕೂಡಾ  ಶೇವ್ ಮಾಡಿಕೊಳ್ಳೋ . ಗಡ್ಡ ಬಿಡಬೇಡ ಎಂದು ಸುತ್ತ ಮುತ್ತಲಿನ ಎಲ್ಲರಿಗೂ ಕೇಳುವಂತೆ ಮೆಲ್ಲಗೆ ಹೇಳಿದರು .

ಆದರೂ ಯಾರ ಆಕ್ಷೇಪಣೆಗಳಿಗೂ ತಲೆ ಕೆಡಿಸಿಕೊಳ್ಳದೇ ಗಡ್ಡ ಬಿಡಲಾರಂಭಿಸಿದೆ.
ಸ್ವಲ್ಪ ದಿನಗಳಲ್ಲಿ ಹುಲುಸಾಗಿ ಬೆಳೆಯಲಾರಂಭಿಸಿತ್ತು.

ಕನ್ನಡಿಯ ಮುಂದೆ ನಿಂತು ಹುಲುಸಾದ ಗಡ್ಡದಲ್ಲಿ ಕೈಯಾಡಿಸುತ್ತಿದ್ದರೇ
ಸಪ್ತ ಲೋಕಗಳಲ್ಲಿ ಸಂತೋಷದಿಂದ ವಿಹರಿಸುತ್ತಿರುವ ಅನುಭವ.

ಈ ಸಂತೋಷಕ್ಕೂ ಕೆಲವೇ ದಿನಗಳಲ್ಲಿ ಕಲ್ಲು ಬಿತ್ತು.

ಪೋಲಿಸ್ ಕಾನ್ಸ್ಟೇಬಲ್ ಒಬ್ಬರು ನನ್ನನ್ನು ನೋಡಿ ತೀರಾ ಹತ್ತಿರಕ್ಕೆ ಬಂದು ಏನೇನೋ ಪ್ರಶ್ನೆಗಳನ್ನು ಕೇಳಲಾರಂಭಿಸಿದರು.

ನೀವ್ಯಾರು ?

ಹೇಳಿದೆ

ಕರ್ನಾಟಕದಲ್ಲಿ ಎಷ್ಟು ವರ್ಷಗಳಿಂದ ಇದೀರಾ ?

ಹುಟ್ಟಿದಾಗಿನಿಂದ.

ಏನು ಕೆಲಸ ಮಾಡ್ತಾ ಇದ್ದೀರ ಇತ್ಯಾದಿ ಕೇಳಲಾರಂಭಿಸಿದರು.

ನಾನು ಏನು ವಿಷಯ ಸಾರ್ ಎಂದು ಎದೆಯಲ್ಲಿ ಇದ್ದ ನಡುಕವನ್ನು ದನಿಯಲ್ಲಿ ತೋರದೇ ಕೇಳಿದೆ.

ನೊಟೋರಿಯಸ್ ಕಳ್ಳ ಒಬ್ಬ ಥೇಟ್ ನಿಮ್ಮ ಹಾಗೇ ಇದ್ದಾನೆ . ಪೋಲೀಸ್ ಸ್ಟೇಷನ್ ನಿಂದ ತಪ್ಪಿಸಿಕೊಂಡಿದ್ದಾನೆ .
ಅವನನ್ನೇ ಹುಡುಕುತ್ತಿದ್ದೇವೆ. ಎಂದರು .

ಬುದ್ಧನ ಉಪದೇಶದಲ್ಲಿನ ಸತ್ಯ ಅನಾವರಣಗೊಳ್ಳಲಾರಂಭಿಸಿತ್ತು

ಆಸೆಯೇ ದುಃಖ ಕ್ಕೆ ಮೂಲ ಎಂದುಕೊಂಡು ಇನ್ನೂ ಆ ಕಾನ್ಸ್ಟೇಬಲ್ ನಿಂತು ಮಾತನಾಡುತ್ತಿರುವಾಗಲೇ ಒಳಗೆ ಓಡಿಹೋಗಿ ಎರಡೇ ನಿಮಿಷಗಳಲ್ಲಿ ಗಡ್ಡ ಬೋಳಿಸಿಕೊಂಡು ಅವರೆದುರು ನಿಂತೆ

ಓ ನೀವಾ ಸಾರ್ ಗಡ್ಡ ಬಿಟ್ಟು ಎಷ್ಟು ಕನ್ಫ್ಯೂಸ್ ಮಾಡಿದಿರಲ್ಲಾ . ನನ್ನ ಮಗನ ಮೇಷ್ಟ್ರು ನೀವು ನಿಮ್ಮನ್ನು ಅನುಮಾನಿಸೋಹಾಗೆ ಮಾಡಿಬಿಟ್ರಲ್ಲಾ ಎಂದು ಹೇಳಿ ಕೈ ಕುಲುಕಿ ಸಾರಿ ಸಾರ್ ಎಂದು ಹೇಳಿ ಹೊರಟೇ ಹೋದರು .

ಬಾಯಿಗೆ ಬಂದಿದ್ದ ಜೀವ ಮತ್ತೆ ಸ್ವಸ್ಥಾನ ಸೇರಿತ್ತು .

ನನ್ನ ಹೆಂಡತಿ ನನ್ನತ್ತ ನೋಡಿ ಬೇಕಿತ್ತ ಇಷ್ಟೆಲ್ಲಾ ಎನ್ನುವಂತೆ ಕಿಸಕ್ಕನೆ ನಕ್ಕಳು .

ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳಂಥಾ ಅರಿಷಡ್ವರ್ಗಗಳನ್ನಂತೂ ಬಿಡಲಾಗಲಿಲ್ಲ

ಗಡ್ಡವನ್ನಾದರೂ ಸುಲಭವಾಗಿ ಬಿಡಬಹುದು ಎಂದುಕೊಂಡಿದ್ದೆ

ಅದೂ ಕೂಡಾ ಅಸಾಧ್ಯ ಎಂದು ಮನವರಿಕೆಯಾಗಿಹೋಯಿತು.

ಛೇ ಛೇ ನನ್ನ ಬಾಳು ಹೀಗಾಗಬಾರದಾಗಿತ್ತು.

Monday, February 4, 2019

ಬೇಡಿಕೆ

ಸಮಯವಾಯಿತೆಂದು ನೀನು
ಮುಳುಗಿಹೋದರೇನು ಚೆನ್ನು
ಕತ್ತಲೆ ಸಾಮ್ರಾಜ್ಯ ತಾನು
ರಾರಾಜಿಸದೇನು

ಜಗದ ಜೀವಕೋಟಿಗೆಲ್ಲ
ನಿನ್ನದೆ ಬಲ ಬೇರೆಯಲ್ಲ
ತಿಳಿದು ಮುಳುಗುತಿರುವೆಯಲ್ಲ
ನಿನಗಿದು ಸಲ್ಲ

ಬಳಸಿ ನಿನ್ನ ಶಕ್ತಿಯನ್ನು
ಜೀವಜಾಲ ಧನ್ಯತೆಯನು
ತೋರೆ ಇಲ್ಲಿ ನರನು ತಾನು
ಮೆರೆಯುತಿರುವನು

ಎಲ್ಲೆಡೆ ಬೆಳಕನ್ನು ಬೀರಿ
ಕರ್ತವ್ಯದ ಮಹಿಮೆ ಸಾರಿ
ನಡೆವ ನೀನೆ ಮಾದರಿ
ಭುವಿಗೆ ನೀನೇ ಐಸಿರಿ

ಭುವಿಗೆ ಬೆಳಕ ಬೀರಿ ನೀನು
ಹರಡಿಹ ತಮ ತೊಳೆಯಲೇನು
ನರನ ಮನದ ತಿಮಿರವನು
ತೊಡೆಯಲಾಗದೇನು?

ನಾನೇ ಹೆಚ್ಚು ಎನುವ ತಿಮಿರ
ನನದೆ ಎಲ್ಲ ಎನುವ ಅಮಲ
ದೇವನ ಧಿಕ್ಕರಿಪ ತೆವಲ
ತೆಗೆಯಲಾರೆಯೇನು?

ಇಂದು ನೀನು ಮುಳುಗಲೇನು
ನಾಳೆ ನಿಜದಿ ಬರುವೆ ನೀನು
ಅಹಮಿನಲ್ಲೇ ಮುಳುಗಿದೆನಗೆ
ನಾಳೆ ನಿನ್ನ ಕರುಣ ಕಿರಣ
ನಿಜದಿ ದೊರೆವುದೇನು
ನನಗೆ ನಾಳೆ ಇರುವುದೇನು
ಹೇಳೆನಗೆ ನಾಳೆ ಇರುವುದೇನು



Sunday, February 3, 2019

ನಾನೂ ನನ್ನ ಜೀವನ.

ನಾನೂ ನನ್ನ ಜೀವನ ಅದೊಂದು ವಾಕ್ಯದಿಂದ ತಿರುವು ಪಡೆದೀತು ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಹೊಸ ಶಾಲೆಗೆ ಶಿಕ್ಷಕನಾಗಿ ಸೇರಿದ ಒಂದು ತಿಂಗಳಲ್ಲೇ ನನ್ನ ಮೇಲೆ ನನಗೇ ವಿಶ್ವಾಸ ಕಡಿಮೆಯಾಗಿ ಶಾಲಾ ವಾತಾವರಣ ಪ್ರತಿಕೂಲ ವಾಗಿ ಒಳಸೇರುವ ಆಮ್ಲಜನಕವೇ ಅನಾರೋಗ್ಯ ಕಾರಕವಾಗುವ ಸ್ಥಿತಿ ನಿರ್ಮಾಣವಾಗಿತ್ತು. ಥತ್ ಈ ಉಸಿರು ಕಟ್ಟಿಸುವ ವಾತಾವರಣವೂ ಬೇಡ, ಶಾಲೆಯೂ ಬೇಡ ಬಿಟ್ಟು ತೆರಳೋಣ ಬೇರೆ ಯಾವುದಾದರೂ ಶಾಲೆ ನೋಡಿಕೊಳ್ಳೋಣ ಎಂದು ನಿರ್ಧಾರ ಮಾಡಿದ ಸಂಜೆ ಎಂದಿನಂತೆ ಮನೆಪಾಠಕ್ಕೆ ತೆರಳಿದೆ. ಅಲ್ಲಿ ಆ ದಿನ ಪಾಠ ಶುರು ಮಾಡುವ ಮೊದಲು ನನ್ನ ವಿದ್ಯಾರ್ಥಿನಿಯು ತನ್ನ ನೋಟ್ ಬುಕ್ ನಲ್ಲಿ ಮೊದಲ ಪುಟದಲ್ಲಿ ಬರೆದುಕೊಂಡಿದ್ದ ವಾಕ್ಯ ನನ್ನಲ್ಲಿ ಛಲವೊಂದನ್ನು ಹುಟ್ಟು ಹಾಕಿತು. ಕುಳಿತಲ್ಲಿ ನಿಂತಲ್ಲಿ ಎಲ್ಲೆಂದರಲ್ಲಿ ಎಡಬಿಡದೆ ಮನಸ್ಸನ್ನು ಕಾಡತೊಡಗಿತ್ತು. ಸಾಕಷ್ಟು ಅಂತರ್ಮಥನಕ್ಕೊಳಮಾಡಿತೆಂದರೆ ಅತಿಶಯೋಕ್ತಿಯಾಗಲಾರದು. ತದನಂತರ ನನ್ನ ಪ್ರಯತ್ನಕ್ಕೊಂದು ರೂಪುರೇಷೆ ನೀಡಿ ಅದರಂತೆ ಎಡೆಬಿಡದೆ ಶ್ರಮ ಶ್ರದ್ಧೆ ವಹಿಸಿ ತರಗತಿಗಳನ್ನು ತೆಗೆದುಕೊಳ್ಳಲಾರಂಭಿಸಿದೆ. ಪರಿಣಾಮ ಹೆಚ್ಚಿದ ಆತ್ಮವಿಶ್ವಾಸ. ಧೈರ್ಯ. ಅದರ ಪ್ರತಿಫಲವಾಗಿ ಈ ಶಾಲೆಯಲ್ಲಿ ಮೂರು ದಶಕಗಳಿಂದ ಬೋಧಕನಾಗಿದ್ದೇನೆ. ಎಷ್ಟರಮಟ್ಟಿಗೆ ಎಂದರೆ ಮಕ್ಕಳು ನಮಗೆ ಈ ಸರ್ ಕ್ಲಾಸ್ ಗಳು ಸಿಗಲಿ ಎಂದು ವಂಚಿತ ತರಗತಿಗಳ ಮಕ್ಕಳು ಹಾತೊರೆಯುವಷ್ಟು.
ಅಂದಹಾಗೆ ನನ್ನ ಬದುಕಿನ ತಿರುವಿಗೆ ಕಾರಣವಾದ ಆ ವಾಕ್ಯವಾದರೂ ಯಾವುದು?
ಗೆಲ್ಲುವವನು ತೊರೆಯುವುದಿಲ್ಲ ತೊರೆದವನು ಗೆಲ್ಲುವುದಿಲ್ಲ winner never quits, quitter never wins

ಅಯ್ಯೋ ಹಬ್ಬಗಳೇ.
ಸಂಕ್ರಾಂತಿ ಬಹ ಮುನ್ನ ಪೇಟೆ ಗಿಜಿಗುಡುತಿತ್ತು
ಹೆಜ್ಜೆ ಹೆಜ್ಜೆಗು ಸಿಗುವ ವ್ಯಾಪಾರ ಮಳಿಗೆ
ವರ್ತಕರ ಕಂಗಳವು ಗ್ರಾಹಕರನರಸಿತ್ತು
ಬೆಳಗಿನಿಂ ಕೂಗುತಲಿ ಬೈಗಿನಾವರೆಗೆ

ಮಾವಿನೆಲೆ ಕೊಂಬೆಗಳ ತರಿದ ರಾಶಿಯದೊಂದು
ಪೇರಿಸಿಟ್ಟಿಹ ರಸದ ಕಬ್ಬುಗಳ ಕಟ್ಟು
ತಳ್ಳುಗಾಡಿಯ ತುಂಬ ಬಗೆಬಗೆಯ ಹೂ ತಂದು
ಮಾರುತಿಹರೆಲ್ಲರೂ ಚಿತ್ತವಿಟ್ಟು

ವಿಧಿಯಿಲ್ಲ ಕೊಳ್ಳುವರು ಗ್ರಾಹಕರು ಎಂದೆಂಬ
ಎಣಿಕೆಯಲಿ ವಿಪರೀತ ಬೆಲೆಯನಿಟ್ಟು
ಎಷ್ಟು ಸಾಧ್ಯವೊ ಅಷ್ಟು ಗಳಿಸಲೇಬೇಕೆಂಬ
ಹಟವ ವರ್ತಕರೆಲ್ಲ ಮನದಿ ತೊಟ್ಟು

ಕಬ್ಬು ಕೊಳ್ಳಲು ಬಂದ ಸಿರಿವಂತರೂ ಕೂಡ
ಏರಿರ್ದ ಬೆಲೆಯ ಕಹಿ ಉಂಡರಂದು
ಇದ್ದವರ ಸ್ಥಿತಿ ಹೀಗೆ ಇಲ್ಲದವರದು ಬೇಡ
ಅತ್ಯಲ್ಪವನು ಕೊಂಡು ತಂದರಂದು

ಹಬ್ಬಕ್ಕೆ ಬೇಕಾದ ಸಡಗರವೆ ಮರೆಯಾಯ್ತು
ಶಾಸ್ತ್ರಕ್ಕೆ ಹಬ್ಬವನು ಕೈಕೊಂಡರು
ಸಂಪ್ರದಾಯವನುಳಿಪುದಷ್ಟೇ ಸಾಕಾಗಿತ್ತು
ಎಲ್ಲ ಬೆಲೆ ಬಿಸಿಯಿಂದ ಬಸವಳಿದರು


ಇದನೆಲ್ಲ ಬೆಳೆದಂಥ ರೈತ ಪಡೆದನೆ ಲಾಭ?
ಗ್ರಾಹಕನು ಪಡೆದನೇ ಹೆಚ್ಚು ಸರಕು?
ಹೆಚ್ಚು ಬೆಲೆ ತುಂಬಿತ್ತು ಮಧ್ಯವರ್ತಿಯ ಜೇಬ
ಮರೆಯಾಗುವುದು ಎಂದು ಇಂಥ ತೊಡಕು?

ಹಬ್ಬ ಯಾವುದೆ ಇರಲಿ ಸ್ಥಿತಿ ಮಾತ್ರ ಹೀಗೆ
ಸಾಧ್ಯವಾದಷ್ಟನ್ನು ಗೋರುವಾಸೆ
ಗಳಿಕೆ ತೃಷೆಯನು ತಣಿಪ ಭಾವವದು ಮರೆಯಾಗೆ
ನಿಜದ ಸಂತಸವೆಂಬುದೆಂದಿಗೂ ಕನಸೆ




ಮಗುವಿನ ಮನದಾಳ

ವಾರದಲ್ಲಿ ಒಂದು ದಿನಕೆ ಬಂದು ನಿಂತಿದೆ
ಜಣಗುಡುವ ಬಳೆಧರಿಸುವ ಸಂಭ್ರಮ
ಉಳಿದ ದಿನ ಶಾಲೆ ಎಂಬುದೊಂದಿದೆ
ಧರಿಸೆ ಶಾಲೆಯಲ್ಲಿ ಪಡೆವೆ ಶಿಸ್ತಿನ ಕ್ರಮ

ವಾರದ ರಜೆ ಭಾನುವಾರ ಬಳೆಯ ಧರಿಸಿದೆ
ನಿಮ್ಮ ಕೈಯ ತೆರದಿ ನನದು ಕಾಣಲು
ಮತ್ತೆ ತೊಡಲು ಆರು ದಿನ ಕಾಯಬೇಕಿದೆ
ಗಲಗಲ ಬಳೆ ಸದ್ದ ನಾನು ಕೇಳಲು

ಕುಂಕುಮ ಹಣೆಗಿರಸಬಾರದೆಂಬ ರೂಲಿದೆ
ಹೂವ ಮುಡಿಯಬಾರದಂತೆ ಎಂದಿಗೂ
ಬಳೆಯ ತೊಟ್ಟವರ್ಗೆ ಒಳಗೆ ಅನುಮತಿಯಿರದೆ
ಸಂಪ್ರದಾಯದುಡುಗೆ ಸಲ್ಲ ಇಂದಿಗೂ

ಪುಟ್ಟ ಬಾಯಿ ದೊಡ್ಡ ಪ್ರಶ್ನೆ ಕೇಳಲೇನು ಹೇಳು
ನಮ್ಮತನವದೆಂಬುದೊಂದು ನಮಗಿಲ್ಲವೆ
ತುಂಡುಲಂಗ ಧರಿಸಿದೊಡನೆ ಬಂದುದೇನು ಹೇಳು
ಮೈಯ ತುಂಬ  ಬಟ್ಟೆ ಧರಿಸಬೇಡವೆ

ಯವನರೆಮ್ಮ ತೊರೆದು ಏಳುದಶಕವಾಯಿತು
ನಾವು ಅವರನನುಕರಿಸುತಲಿರುವೆವು
ಜಗಕೆ ಬಾಳ ತಿರುಳನೊರೆದ ರಾಷ್ಟ್ರಕೇನಾಯಿತು
ಸ್ವಂತಿಕೆಯನು ಮರೆತು ಬಾಳುತಿರುವೆವು