Monday, February 4, 2019

ಬೇಡಿಕೆ

ಸಮಯವಾಯಿತೆಂದು ನೀನು
ಮುಳುಗಿಹೋದರೇನು ಚೆನ್ನು
ಕತ್ತಲೆ ಸಾಮ್ರಾಜ್ಯ ತಾನು
ರಾರಾಜಿಸದೇನು

ಜಗದ ಜೀವಕೋಟಿಗೆಲ್ಲ
ನಿನ್ನದೆ ಬಲ ಬೇರೆಯಲ್ಲ
ತಿಳಿದು ಮುಳುಗುತಿರುವೆಯಲ್ಲ
ನಿನಗಿದು ಸಲ್ಲ

ಬಳಸಿ ನಿನ್ನ ಶಕ್ತಿಯನ್ನು
ಜೀವಜಾಲ ಧನ್ಯತೆಯನು
ತೋರೆ ಇಲ್ಲಿ ನರನು ತಾನು
ಮೆರೆಯುತಿರುವನು

ಎಲ್ಲೆಡೆ ಬೆಳಕನ್ನು ಬೀರಿ
ಕರ್ತವ್ಯದ ಮಹಿಮೆ ಸಾರಿ
ನಡೆವ ನೀನೆ ಮಾದರಿ
ಭುವಿಗೆ ನೀನೇ ಐಸಿರಿ

ಭುವಿಗೆ ಬೆಳಕ ಬೀರಿ ನೀನು
ಹರಡಿಹ ತಮ ತೊಳೆಯಲೇನು
ನರನ ಮನದ ತಿಮಿರವನು
ತೊಡೆಯಲಾಗದೇನು?

ನಾನೇ ಹೆಚ್ಚು ಎನುವ ತಿಮಿರ
ನನದೆ ಎಲ್ಲ ಎನುವ ಅಮಲ
ದೇವನ ಧಿಕ್ಕರಿಪ ತೆವಲ
ತೆಗೆಯಲಾರೆಯೇನು?

ಇಂದು ನೀನು ಮುಳುಗಲೇನು
ನಾಳೆ ನಿಜದಿ ಬರುವೆ ನೀನು
ಅಹಮಿನಲ್ಲೇ ಮುಳುಗಿದೆನಗೆ
ನಾಳೆ ನಿನ್ನ ಕರುಣ ಕಿರಣ
ನಿಜದಿ ದೊರೆವುದೇನು
ನನಗೆ ನಾಳೆ ಇರುವುದೇನು
ಹೇಳೆನಗೆ ನಾಳೆ ಇರುವುದೇನು



0 Comments:

Post a Comment

Subscribe to Post Comments [Atom]

<< Home