Sunday, February 3, 2019

ಅಯ್ಯೋ ಹಬ್ಬಗಳೇ.
ಸಂಕ್ರಾಂತಿ ಬಹ ಮುನ್ನ ಪೇಟೆ ಗಿಜಿಗುಡುತಿತ್ತು
ಹೆಜ್ಜೆ ಹೆಜ್ಜೆಗು ಸಿಗುವ ವ್ಯಾಪಾರ ಮಳಿಗೆ
ವರ್ತಕರ ಕಂಗಳವು ಗ್ರಾಹಕರನರಸಿತ್ತು
ಬೆಳಗಿನಿಂ ಕೂಗುತಲಿ ಬೈಗಿನಾವರೆಗೆ

ಮಾವಿನೆಲೆ ಕೊಂಬೆಗಳ ತರಿದ ರಾಶಿಯದೊಂದು
ಪೇರಿಸಿಟ್ಟಿಹ ರಸದ ಕಬ್ಬುಗಳ ಕಟ್ಟು
ತಳ್ಳುಗಾಡಿಯ ತುಂಬ ಬಗೆಬಗೆಯ ಹೂ ತಂದು
ಮಾರುತಿಹರೆಲ್ಲರೂ ಚಿತ್ತವಿಟ್ಟು

ವಿಧಿಯಿಲ್ಲ ಕೊಳ್ಳುವರು ಗ್ರಾಹಕರು ಎಂದೆಂಬ
ಎಣಿಕೆಯಲಿ ವಿಪರೀತ ಬೆಲೆಯನಿಟ್ಟು
ಎಷ್ಟು ಸಾಧ್ಯವೊ ಅಷ್ಟು ಗಳಿಸಲೇಬೇಕೆಂಬ
ಹಟವ ವರ್ತಕರೆಲ್ಲ ಮನದಿ ತೊಟ್ಟು

ಕಬ್ಬು ಕೊಳ್ಳಲು ಬಂದ ಸಿರಿವಂತರೂ ಕೂಡ
ಏರಿರ್ದ ಬೆಲೆಯ ಕಹಿ ಉಂಡರಂದು
ಇದ್ದವರ ಸ್ಥಿತಿ ಹೀಗೆ ಇಲ್ಲದವರದು ಬೇಡ
ಅತ್ಯಲ್ಪವನು ಕೊಂಡು ತಂದರಂದು

ಹಬ್ಬಕ್ಕೆ ಬೇಕಾದ ಸಡಗರವೆ ಮರೆಯಾಯ್ತು
ಶಾಸ್ತ್ರಕ್ಕೆ ಹಬ್ಬವನು ಕೈಕೊಂಡರು
ಸಂಪ್ರದಾಯವನುಳಿಪುದಷ್ಟೇ ಸಾಕಾಗಿತ್ತು
ಎಲ್ಲ ಬೆಲೆ ಬಿಸಿಯಿಂದ ಬಸವಳಿದರು


ಇದನೆಲ್ಲ ಬೆಳೆದಂಥ ರೈತ ಪಡೆದನೆ ಲಾಭ?
ಗ್ರಾಹಕನು ಪಡೆದನೇ ಹೆಚ್ಚು ಸರಕು?
ಹೆಚ್ಚು ಬೆಲೆ ತುಂಬಿತ್ತು ಮಧ್ಯವರ್ತಿಯ ಜೇಬ
ಮರೆಯಾಗುವುದು ಎಂದು ಇಂಥ ತೊಡಕು?

ಹಬ್ಬ ಯಾವುದೆ ಇರಲಿ ಸ್ಥಿತಿ ಮಾತ್ರ ಹೀಗೆ
ಸಾಧ್ಯವಾದಷ್ಟನ್ನು ಗೋರುವಾಸೆ
ಗಳಿಕೆ ತೃಷೆಯನು ತಣಿಪ ಭಾವವದು ಮರೆಯಾಗೆ
ನಿಜದ ಸಂತಸವೆಂಬುದೆಂದಿಗೂ ಕನಸೆ




0 Comments:

Post a Comment

Subscribe to Post Comments [Atom]

<< Home