Sunday, February 3, 2019

 ಇದು ಜಮ್ಮುಕಾಶ್ಮೀರದ ಡಾವರ್ ಎಂಬ ಎಂಬ ಹಳ್ಳಿ..ಸತತವಾಗಿ ಬೀಳುವ ಹಿಮಗಳ ಕಾರಣ ಈ ಪ್ರದೇಶದಲ್ಲಿ ಅಲ್ಲಿನ ನಾಗರಿಕರು ವರ್ಷದಲ್ಲಿ ಕೇವಲ 6 ತಿಂಗಳು ಮಾತ್ರ ಅಲ್ಲಿ ವಾಸ ಮಾಡುತ್ತಾರೆ ಉಳಿದ ಸಮಯ ಅಂದರೆ ಚಳಿಗಾಲ ಅಲ್ಲಿ ಮನುಷ್ಯರು ವಾಸಿಸಲು ಅನುಕೂಲವಾಗುವ ವಾತವರಣ ಇರುವುದಿಲ್ಲ..
 ಆದರೆ ನಮ್ಮ ವೀರಯೋಧರು ವರ್ಷಪೂರ್ತಿ ಅಲ್ಲಿಯೇ ಇರುತ್ತಾರೆ.. ಆ ಚಿತ್ರದಲ್ಲಿ ಕಾಣುತ್ತಿರುವ ಬೆಟ್ಟ ಇದೆಯಲ್ಲಾ ಅದರಾಚೆಗೆ ಇರುವುದು ಶತ್ರು ದೇಶ ಪಾಕಿಸ್ತಾನ್...
ರುದ್ರರಮಣೀಯ ಚಿತ್ರದ ಹಿಂದೆ ನಮ್ಮ ಗಡಿ ಕಾಯುವ ವೀರಯೋಧರ ಕರ್ಣಕಠೋರ ಕಥೆಯಿದೆ...
ಆ ಯೋಧರ ಅನಿಸಿಕೆಗಳನ್ನು ಪದ್ಯ ರೂಪದಲ್ಲಿ ಬರೆದಿದ್ದೇನೆ

ಸುತ್ತೆಲ್ಲ ಎಡೆಬಿಡದೆ  ಮಂಜು ಸುರಿಯುತಿದೆ
ಮೂಳೆರಕ್ತವ ಛಳಿಯು ಹೆಪ್ಪುಗಟ್ಟಿಸಿದೆ
ಶತೃವೆಂದೆರಗುವನೋ ಯಾವ ದಿಕ್ಕಿನಲೋ
ಗಡಿಯಲ್ಲಿ ನಿಂತು ನಾ ಕಾಯಲೇಬೇಕಿದೆ

              ಶತೃ ಎದುರಲಿ ನಿಂದು ಬಂದೂಕವೆದೆಗಿಡಲು
              ಮಾನವೀ ಮೌಲ್ಯಗಳ  ತಿಳಿಪರಾರು?
              ಗುಂಡಿಗೆಗೆ ಗುಂಡಿಳಿವ ಮುನ್ನ ಮುಂದಡಿಯಿಡಲು
              ಬಾಳ್ನನಿಶ್ಚಿತತೆಯ ತೋರ್ವರಾರು?

ಅಧಿಕಾರಲಾಲಸೆಗೆ ದೇಶ ಒಡೆದರು ಅಂದು
ಆಂಗ್ಲರಿಂ ಸ್ವಾತಂತ್ರ್ಯ ಪಡೆಯುವಂದು
ದಶಕಗಳೆ ಉರುಳಿದರು ದ್ವೇಷದುರಿನಂದದು
ಈ ಸಾವು ನೋವ್ಗಳಿಗೆ ಕೊನೆಯು ಇನ್ನೆಂದು

               ಡಾವರದ ಮಣ್ಣಿನಲಿ ಕನಸಿನಲಿ  ತಿನಿಸಿನಲಿ
               ಬೀಸುವಲರಲಿ ಹೂವ ಸೌಗಂಧದಲ್ಲಿ
               ಮಕರಂದದಲಿ ಹರಿವ ನೀರ ಹನಿಹನಿಯಲ್ಲಿ
               ರುಧಿರ ವಾಸನೆ ತುಂಬಿ ತುಳುಕುತಿಲ್ಲಿ

ಸೈನಿಕರಿಗಾಗಿಯೇ ಈ ದೇಶವಿದೆಯೇನು
ಸೈನಿಕರು ಮಾತ್ರವೇ ಕಾಯಬೇಕೇನು
ರಾಷ್ಟ್ರರಕ್ಷಣೆ ಹೊಣೆಯು ಪ್ರಜೆಗಳಿಗೆ ಬೇಡೇನು
ಇಂಥ ಸತ್ಕಾರ್ಯಕ್ಕೆ ಮುಂಬನ್ನಿರಿನ್ನು

              ಸೈನಿಕರು ಮಾತ್ರವೇ ದೇಶ ಕಾಯಲು ಬೇಕು
              ಎಂಬ ಭ್ರಾಂತಿಯ ತೊರೆದು ನುಗ್ಗಿ ಬನ್ನಿ
              ಕಾದಲು ಕಾಯಲು ಸಿಂಹ ಗುಂಡಿಗೆ ಬೇಕು
              ಎಂಬ ಸತ್ಯವನೀಗ ಅರಿಯಬನ್ನಿ

ಪ್ರತಿ ನಾಗರಿಕನಿಗೂ ತರಬೇತಿಯನು ನೀಡಿ
ಬಂದೆಲ್ಲ ದೇಶವನು  ಕಾಯಲಿಲ್ಲಿ
ಜಾತಿ ಮತ ಲಿಂಗಗಳ ಬಿಟ್ಟೆಲ್ಲರೊಗ್ಗೂಡಿ
ಗಡಿಯಲಡಿತೆಗೆಯದೆಲೆ ನಿಲ್ಲಲಿಲ್ಲಿ

               ಶಿಸ್ತು ಸಂಯಮ ಮರೆತು ಸ್ವಾರ್ಥದಿಂದಲಿ ಮಲೆತು
               ವಾಕ್ಸಮರದಲಿ ಧೈರ್ಯ ಮೆರೆವವರೆ ಬನ್ನಿ
               ಕೇಳಿಸದು ಕಿವಿಮುಚ್ಚೆ ಇತರರಾಡುವ ಮಾತು
               ಗುಂಡಿಗಾಗತಿಯಿಲ್ಲ ನೋಡಬನ್ನಿ

ಅಧಿಕಾರ ಅಂತಸ್ತು ಅತಿ ಆಸ್ತಿ ಸಂಪತ್ತು
ಇದರಲ್ಲೇ ಮುಳುಗೇಳ್ವ ರಾಜಕಾರಣಿಯೆ
ದೇಶ ಸಂರಕ್ಷಣೆಯ ಹೊಣೆಯ ನೀ ಹೊತ್ತು
ಇಲ್ಲಿ ಬರುವಾ ಮುನ್ನ ಶ್ರಮವನರಿಯೆ

              ಸುತ್ತ ರಕ್ಷಕ ಭಟರು ಕಣ್ಗಾವಲಿನ ನಡುವೆ
              ಮೆರೆದು ಶೌರಿಯ ತೆರದಿ ಆಡುವವರೆಲ್ಲ
              ಕೊರೆವ ಛಳಿಯಲಿ ಬಟ್ಟಬಯಲಿನ ನಡುವೆ
              ನಿಂತಾಗ ತಿಳಿಯುವುದು ಶೌರ್ಯವೆಲ್ಲ

ಶತೃವನು ಕೊಂದಾಗ ಮೆಚ್ಚದೆಲೆ ಹೊಗಳದೆಲೆ
ಅದರಲ್ಲೂ ಲಾಭವು ನಿಮಗೆ ಸಿಗೆ ಸಾಕು
ಜೀವಕಾಪತ್ತಿಲ್ಲ ಉಂಬುವುದು ಖಚಿತವಿರೆ
ದೇಶ ಕಾಯುವ ಕೆಲಸ ಏಕೆ ಬೇಕು?

                 ನಿತ್ಯ ದೀಪಾವಳಿ ನಡೆದಿಹುದು ಇಲ್ಲೆಲ್ಲ
                 ಬರಲಿ ಪರಿಸರವಾದಿ ಮಾಲಿನ್ಯ ತಡೆಗೆ
                 ಸಿಡಿದ ಮದ್ದಿನಿಂ ಗಂಧಕದ ಹೊಗೆ ಎಲ್ಲ
                 ಶುದ್ಧ ಹವೆಯದು ಸಿಗಲಿ ನಮ್ಮ ನಾಸಿಕಕೆ

ಮೈಕು ಸಿಕ್ಕೊಡೆ ಕೊರೆವ ಬುದ್ದಿಜೀವಿಗಳೆಲ್ಲ
ಪಾಮರರ ಬಿಟ್ಟರಿಗಳೆದುರೊರಲಿರೈ
ಬೇಸತ್ತು ಭಾಷಣಕೆ ಓಡೆ ಶತೃಗಳೆಲ್ಲ
ಕೂಗಿರೈ ಆಗೊಮ್ಮೆ ಭಾರತಿಗೆ ಜೈ

ಸದಾ ದೇಶಭಕ್ತಿ , ಸೈನಿಕರು ಎಂದರೆ ನನ್ನ ಎದೆ ವಿಸ್ತಾರವಾಗುತ್ತದೆ. ಮನಸ್ಸಿನಲ್ಲಿ ಸದಾ ಅನಿರ್ವಚನೀಯ ಗೌರವ. ನಾನು ಪಾಠ ಮಾಡುವಾಗಲೂ ನನ್ನ ಕರ್ಮಭೂಮಿ ಭಾರತದ ಬಗ್ಗೆ ದೇಶಪ್ರೇಮೋತ್ತೇಜಕ ಮಾತುಗಳನ್ನು ಆಡಿಯೇ ಆಡುತ್ತೇನೆ. ಒಮ್ಮೆಯಂತೂ ನನ್ನ ಮಾತಿನಿಂದ ಒಬ್ಬ ವಿದ್ಯಾರ್ಥಿ ಎಷ್ಟು ದೇಶಭಕ್ತಿಯನ್ನು ಹೃದಯದ ತುಂಬಾ ತುಂಬಿಸಿಟ್ಟುಕೊಂಡಿದ್ದನೆಂದರೆ ದೇಶದ ಬಗ್ಗೆ ಹೀನಾಯವಾಗಿ ಮಾತನಾಡಿದ ತನ್ನ ಸಹಪಾಠಿಯ ಕೆನ್ನೆಗೆ ಬಾರಿಸಿದ್ದ. ಅವನನ್ನು ಪ್ರಾಂಶುಪಾಲರ ಬಳಿ ಶಿಸ್ತಿನ ಕ್ರಮಕ್ಕೆ ಒಯ್ದಾಗ ನನ್ನ ರಾಷ್ಟ್ರದ ಬಗ್ಗೆ ಕೆಟ್ಟದಾಗಿ ಆಲೋಚಿಸುವ ಮಾತನಾಡುವ ಯಾರಿಗಾದರೂ ನಾನು ಇದೇ ರೀತಿ ಮಾಡುತ್ತೇನೆ. ನನ್ನದು ತಪ್ಪಿದ್ದರೆ ನನ್ನನ್ನು ಶಿಕ್ಷಿಸಿ ಎಂದಿದ್ದ. ನನ್ನ ರಾಷ್ಟ್ರದ ಬಗೆಗೆ ನನ್ನ ವಿದ್ಯಾರ್ಥಿಗಳು ಹೀನಾಯವಾಗಿ ನನ್ನೆದುರು ಮಾತನಾಡದಂತೆ ತಾಕೀತು ಮಾಡುವುದರ ಫಲ ನನ್ನ ಕೆಲವು ವಿದ್ಯಾರ್ಥಿಗಳು ಸೈನ್ಯಕ್ಕೆ ಸೇರಿ ದೇಶಸೇವೆ ಮಾಡುತ್ತಿದ್ದಾರೆ ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳಿಕೊಳ್ಳುತ್ತೇನೆ. ನನಗಂತೂ ಆ ಸುಯೋಗ ಕೂಡಿಬರಲಿಲ್ಲವೆಂಬ ಖಿನ್ನತೆ ನನ್ನನ್ನು ಸದಾ ಕಾಡುತ್ತದೆಯಾದರೂ ನನ್ನ ವಿದ್ಯಾರ್ಥಿಗಳನ್ನು ನೆನೆದು ನನ್ನ ಖಿನ್ನತೆಯಿಂದ ಹೊರಬರುತ್ತೇನೆ.
ಜಯ ಭಾರತ ಜಯ ಭಾರತ ಜಯಜಯ ಭಾರತ 
               
               











0 Comments:

Post a Comment

Subscribe to Post Comments [Atom]

<< Home